ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಗಳವಾರ ದೆಹಲಿಯ ಜಂತರ್ ಮಂತರ್ ಎದುರು ನಡೆಯುವ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಹೊರಟಿದ್ದ ಕರ್ನಾಟಕದ ರೈತರನ್ನು ಮಧ್ಯಪ್ರದೇಶ ಸರ್ಕಾರ ಭೋಪಾಲ್ ನಲ್ಲಿ ಬಂಧಿಸಿದೆ. ಇದನ್ನು ಖಂಡಿಸಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರದ ದುಷ್ಕೃತ್ಯದ ಹಿಂದಿನ ಮೆದುಳು ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವೆಂದು ಕಿಡಿ ಕಾರಿದ್ದಾರೆ.
ನಮ್ಮ ರಾಜ್ಯದ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಾಳೆ ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಕಳಿಸಿಕೊಡಬೇಕು. ಈ ರೀತಿ ರೈತರನ್ನು ದಬ್ಬಾಳಿಕೆಯಿಂದ ಹತ್ತಿಕ್ಕಿಲಾಗದು. ಇದರಿಂದ ಮತ್ತಷ್ಟು ರೈತರು ಬೀದಿಗೆ ಇಳಿಯುತ್ತಾರೆ. ಆದರೆ, ಮಣ್ಣಿನ ಮಕ್ಕಳ ಹೋರಾಟ ನಿಲ್ಲುವುದಿಲ್ಲ ಎಂದರು.
ಬಿಜೆಪಿಗೆ ಅಧಿಕಾರ ಸಿಕ್ಕರೆ ಮೊದಲು ದಂಡ ಪ್ರಯೋಗ ಮಾಡುವುದು ರೈತರ ಮೇಲೆ ಎನ್ನುವುದಕ್ಕೆ ಇತಿಹಾಸವಿದೆ. ಸಾಕ್ಷಿಯಿದೆ. ಗೊಬ್ಬರ ಕೇಳಿದ ರೈತರನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಗುಂಡಿಕ್ಕಿ ಕೊಂದಿತ್ತು ಎಂದು ಹಿಂದಿನ ಬಿಎಸ್ವೈ ಸಿಎಂ ಆಗಿದ್ದಾಗಿನ ಕರಾಳ ಘಟನೆನ್ನು ನೆನಪಿಸಿ ಆಕ್ರೋಶ ವ್ಯಕ್ತಪಡಿಸಿದರು.