ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಬಜೆಟ್ ಅಧಿವೇಶನ ಇಂದಿನಿಂದ ಶುರುವಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್, ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್.ಕೆ ಪಾಟೀಲ ಸೇರಿ ಇತರರು ಸ್ವಾಗತಿಸಿದರು.
ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಸರ್ಕಾರ ನುಡಿದಂತೆ ನಡೆಯುವ ಮೂಲಕ ಜನರ ಪ್ರೀತಿ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಡೆದುಕೊಂಡಿದೆ ಎಂದು ಶ್ಲಾಘಿಸಿದರು. ಗ್ಯಾರೆಂಟಿ ಯೋಜನೆಯಿಂದ ರಾಜ್ಯದ 7 ಗಂಟೆ ಜನರಲ್ಲಿ ಬದಲಾವಣೆ ತಂದಿದೆ. ಇದರಿಂದಾಗಿ 1.2 ಕೋಟಿ ಕುಟುಂಬಗಳು ಬಡತನ ರೇಖೆಯಿಂದ ಮಧ್ಯಮ ವರ್ಗಕ್ಕೆ ಬರುತ್ತಿವೆ. 3.5 ಕೋಟಿ ಮಹಿಳೆಯರು ಶಕ್ತಿ ಯೋಜನೆ, 1.60 ಕುಟುಂಬಗಳು ಗೃಹ ಜ್ಯೋತಿ ಯೋಜನೆ, 1.17 ಕೋಟಿ ಮಹಿಳಯರು ಗೃಹ ಲಕ್ಷ್ಮಿ ಯೋಜನೆ ಪಡೆಯುತ್ತಿದ್ದಾರೆ ಎಂದರು.
ಅನುದಾನ ಹಾಗೂ ತೆರಿಗೆ ಪಾಲು ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿದೆ. ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತು. ಈ ಬಗ್ಗೆ ಮಾತನಾಡಿದ ರಾಜ್ಯಪಾಲರು, ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ, ಪಾಲು ಪಡೆಯುವಲ್ಲಿ 10ನೇ ಸ್ಥಾನದಲ್ಲಿದೆ. ನ್ಯಾಯುತವಾಗಿ ಸಿಗಬೇಕಾದ ಪಾಲು ಪಡೆಯಲು ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಇನ್ನು ಸದನಕ್ಕೆ ಬಿಜೆಪಿಯ ಅನೇಕ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯ ಸಿಬ್ಬಂದಿ ಕೇಸರಿ ಶಾಲು ವಿತರಣೆ ಮಾಡಿದೆ. ಬಿಜೆಪಿ ಶಾಸಕರ ಈ ನಡೆಯನ್ನು ಸಾರ್ವಜನಿಕರು ಖಂಡಿಸಿದ್ದಾರೆ. ತಮ್ಮ ಮತಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು, ಅದರ ಪರ ಧ್ವನಿ ಎತ್ತುವುದು ಬಿಟ್ಟು ಬರೀ ಧರ್ಮ ರಾಜಕಾರಣ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿದ್ದಾರೆ.