ಪ್ರಜಾಸ್ತ್ರ ಸುದ್ದಿ
ಮಂಡ್ಯ: ನಗರದ ಪಿಇಎಸ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿದ ಯುವ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು.
ಈ ವೇಳೆ ಮಾತನಾಡಿದ ಅವರು, ದೇಶದ ರೈತರ ಸಾಲ ಮನ್ನಾ ಮಾಡುತ್ತೇವೆ. ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ನೀಡುತ್ತೇವೆ. ಈಗಾಗ್ಲೇ ನೀಡುತ್ತಿರುವ 24 ಸಾವಿರ ಸೇರಿಸಿ 1 ಲಕ್ಷದ 24 ಸಾವಿರ ರೂಪಾಯಿ ನೀಡುತ್ತೇವೆ ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನುಡಿದಂತೆ ನಡೆದಿದ್ದೇವೆ. ಇದರಿಂದಾಗಿ ಮಹಿಳೆಯರಿಗೆ, ಯುವಕರಿಗೆ ಅನುಕೂಲವಾಗಿದೆ. ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ, ಅರೆ ಸರ್ಕಾರಿ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸುತ್ತೇವೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಸಂಬಳ ಹೆಚ್ಚಿಸುತ್ತೇವೆ. ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದ ರೈತರ ಸಂಕಷ್ಟ ಕಂಡಿದ್ದೇನೆ. ಅವರಿಗೆ ನ್ಯಾಯ ಸಿಕ್ಕಿಲ್ಲ. ನಾವು ನ್ಯಾಯ ನೀಡುತ್ತೇವೆ.
ಬಿಜೆಪಿ ಸರ್ಕಾರ 22 ರಿಂದ 25 ಮಂದಿಯ ಸಲುವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಈ ಲೋಕಸಭಾ ಚುನಾವಣೆ ಸಿದ್ಧಾಂತಗಳ ನಡುವಿನ ಯುದ್ಧ. ಸಂವಿಧಾನಕ್ಕಾಗಿ ಇಂಡಿಯಾ ಪಡೆ ಹೋರಾಟ ಮಾಡುತ್ತೆ. ಸಂವಿಧಾನ ಹಾಳು ಮಾಡಲು ಬಿಜೆಪಿ ಹೊರಟಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಖ್ಯಾತಿಯ ವೆಂಕಟರಮಣೇಗೌಡ ಮಧ್ಯೆ ಸ್ಪರ್ಧೆ ಇದೆ.