ಹಾವೇರಿ: ಸಿಎಂ ಬಿ.ಎಸ್ ಯಡಿಯೂರಪ್ಪನವರು ಹಾವೇರಿ ಜಿಲ್ಲಾ ಪ್ರವಾಸದ ವೇಳೆ, ನಿಷೇಧಿತ ಸೇತುವೆ ಮೇಲೆ ಅವರ ಕಾರು ಸೇರಿದಂತೆ ಹತ್ತಾರು ಅಧಿಕಾರಿಗಳ ಕಾರು ಸಂಚಾರ ಮಾಡಿವೆ. ಪ್ರವಾಹದಿಂದಾಗಿ ಸೇತುವೆ ಮೇಲೆ ಸಂಚಾರ ನಿಷೇಧಿಸಲಾಗಿತ್ತು. ಅಧಿಕಾರಿಗಳ ಯಡವಟ್ಟಿನಿಂದ ಹತ್ತಾರು ವಾಹನಗಳು ಸಂಚರಿಸಿವೆ.
ಶನಿವಾರ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ಭೇಟಿಗೆ ಸಿಎಂ ಆಗಮಿಸಿದ್ರು. ಈ ವೇಳೆ ಸವಣೂರ ತಾಲೂಕಿನ ಕುಣಿಮೆಳ್ಳಹಳ್ಳಿಯಲ್ಲಿ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಸಿಎಂ ಭೇಟಿ ನೀಡುವ ಗ್ರಾಮದ ವರದಾ ನದಿಗೆ ಬ್ರಿಟಿಷ್ ಕಾಲದಲ್ಲಿ ಸೇತುವೆ ನಿರ್ಮಾಣವಾಗಿದೆ. ನೆರೆ ಪ್ರವಾಹದಿಂದ ಸೇತುವೆ ಮೇಲೆ ಸಂಚಾರ ನಿಷೇಧ ಮಾಡಲಾಗಿತ್ತು. ಹೀಗಾಗಿ ಲೋಕೋಪಯೋಗಿ ಇಲಾಖೆ ಸೇತುವೆ ಅಂಚಿನಲ್ಲಿ ನಾಮ ಫಲಕ ಸಹ ಹಾಕಿದೆ.
ನಿಷೇಧಿತ ಸೇತುವೆ ಮೇಲೆ ಮುಖ್ಯಮಂತ್ರಿಗಳ ಕಾರು, ಬೆಂಗಾವಲು ಪಡೆಯ ಕಾರುಗಳು, ಅಧಿಕಾರಿಗಳ ವಾಹನ ಸೇರಿದಂತೆ ಹತ್ತಾರು ವಾಹನಗಳು ಸಂಚಾರ ಮಾಡಿದವು. ನಿಷೇಧವಿದ್ದ ಸೇತುವೆ ಮೇಲೆ ಅಧಿಕಾರಿಗಳು ಸಂಚಾರಕ್ಕೆ ಯಾಕೆ ಅವಕಾಶ ಕಲ್ಪಿಸಬೇಕು. ಒಂದು ವೇಳೆ ಏನಾದರೂ ಅನಾಹುತವಾದ್ರೆ ಯಾರು ಹೊಣೆ ಅನ್ನೋ ಪ್ರಶ್ನೆಯನ್ನ ಸ್ಥಳೀಯರು ಮಾಡ್ತಿದ್ದಾರೆ.