ಧಾರವಾಡ : ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿರುವ 27 ವರ್ಷದ ವ್ಯಕ್ತಿಯೊಬ್ಬನಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ. ಈತ ಹುಬ್ಬಳ್ಳಿಯ ಮುಲ್ಲಾ ಓಣಿಯ ವ್ಯಕ್ತಿಯೆಂದು ತಿಳಿದು ಬಂದಿದೆ.
ಮಾರ್ಚ್ 16 ರಿಂದ ಹುಬ್ಬಳ್ಳಿಯಿಂದ ಸಹೋದರನೊಂದಿಗೆ ಹೈದ್ರಾಬಾದ್ ಗೆ ಹೋಗಿದ್ದಾರೆ. ಅಲ್ಲಿಂದ ದೆಹಲಿ. ಮಾರ್ಚ್ 17 ದೆಹಲಿ ವ್ಯಾಪಾರ ಕೆಲಸ ಮುಗಿಸಿಕೊಂಡು ಆಗ್ರಾಕ್ಕೆ ಹೋಗಿದ್ದಾರೆ. ಅಲ್ಲಿಂದ ವಾಸಪ್ ಟ್ರೇನ್ ಮೂಲಕ ರಾತ್ರಿ ದೆಹಲಿಗೆ ಬಂದಿದ್ದಾರೆ. ಮುಂದೆ ಮಾರ್ಚ್ 19ರಂದು ದೆಹಲಿಯಿಂದ ಏರ್ ಏಷಿಯಾ ವಿಮಾನದ ಮೂಲಕ ಮುಂಬೈಗೆ ಬಂದಿದ್ದಾರೆ. ಅದೆ ದಿನ ರಾತ್ರಿ 9 ಗಂಟೆ ಮುಂಬೈನಿಂದ ಖಾಸಗಿ ಬಸ್ ಮೂಲಕ ಹುಬ್ಬಳ್ಳಿಗೆ ಹೊರಟು, ಮಾರ್ಚ್ 20ರ ಬೆಳಗ್ಗೆ ಬಂದಿದ್ದಾರೆ. ಏಪ್ರಿಲ್ 6ರಂದು ಸಂಶದ ಮೇಲೆ ಹೋಟೆಲ್ ವೊಂದರಲ್ಲಿ ಪ್ರತ್ಯೇಕವಾಗಿ ಇಡಲಾಗಿತ್ತು. ಇದೀಗ ಸೋಂಕು ದೃಢಪಟ್ಟಿದೆ.
ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ, ಬಸ್, ಆಟೋಗಳಲ್ಲಿನ ಸಹಪ್ರಯಾಣಿಕರು ಹಾಗೂ ವಾಸ್ತವ್ಯದ ಸುತ್ತ ಮುತ್ತ ಪ್ರದೇಶದ ಸಾರ್ವಜನಿಕರಿಗೂ ಸಹ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಸಂಬಂಧಿಸಿದವರು ಕೂಡಲೇ ಕರೋನಾ ಸಹಾಯವಾಣಿ 104 ಅಥವಾ 1077 ಕರೆ ಮಾಡಿ ತಮ್ಮ ವಿವರಗಳನ್ನು ಸಲ್ಲಿಸಬೇಕು ಹಾಗೂ ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಧಾರವಾಡ ಹೊಸಯಲ್ಲಾಪುರದಲ್ಲಿ ಪತ್ತೆಯಾಗಿದ್ದ ಪಿ 21 ರೋಗಿ, ಗುಣಮುಖರಾಗಿ ಏ.5ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಅದರ ನಂತರ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಇರಲಿಲ್ಲ. ಇದೀಗ ಮತ್ತೊಂದು ಪಾಸಿಟಿವ್ ಪ್ರಕರಣ ಬಂದಿದೆ. ಅವರ ನಿವಾಸ ಸುತ್ತಮುತ್ತಲಿನ ಸ್ಥಳವನ್ನು ಕಟೇನ್ಮೆಂಟ್ ಪ್ರದೇಶವಾಗಿ ಮಾರ್ಪಡಿಸಲಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದದವರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.