ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸರ್ಕಾರಿ ಪತ್ರಗಳಲ್ಲಿ, ವ್ಯವಹಾರಗಳಲ್ಲಿ, ಸರ್ಟಿಫಿಕೇಟ್ ಗಳಲ್ಲಿ ದಲಿತ, ಹರಿಜನ, ಗಿರಿಜನ ಅನ್ನೋ ಪದ ಬಳಸದಂತೆ ಸಮಾಜ ಕಲ್ಯಾಣ ಇಲಾಖೆ ಸೂಚಿಸಿದೆ. ಇದಕ್ಕೆ ಕೆಲವರು ಒಪ್ಪಿಗೆ ಸೂಚಿದ್ರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ದಲಿತ ಪದ ಕೇವಲ ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾದ ಪದವಲ್ಲ. ಸಮಾಜದಲ್ಲಿ ಯಾರು ತುಳಿತಕ್ಕೆ ಒಳಗಾಗಿದ್ದಾರೋ, ಷೋಷಣೆಗೆ ಒಳಗಾಗುತ್ತಾರೋ, ದಮನಿತರು ಇದ್ದಾರೋ ಅವರೆಲ್ಲರ ಸ್ವಾಭಿಮಾನದ ಪ್ರತೀಕವಾಗಿ ದಲಿತ ಪದ ಹುಟ್ಟಿಕೊಂಡಿದೆ. ರಾಜ್ಯ ಸರ್ಕಾರದ ಈ ಆದೇಶ ಮೂರ್ಖತನದಿಂದ ಕೂಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮೋಹನ ರಾಜ ಹೇಳಿದ್ದಾರೆ.
ದಲಿತ ಪದ ಬಳಕೆ ಮಾಡದಂತೆ ಹೇಳುವ ಅಧಿಕಾರ ಯಾವ ಸರ್ಕಾರಕ್ಕೂ ಇಲ್ಲವೆಂದು ದಲಿತ ಸಂಘರ್ಷ ಸಮಿತಿ( ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ ಹೇಳಿದ್ದಾರೆ. ಸರ್ಕಾರಿ ವ್ಯವಹಾರಗಳಲ್ಲಿ ದಲಿತ ಪದ ಬಳಕೆ ಮಾಡಲ್ಲ. ಮಾಡಬಾರದು ಅನ್ನೋದು ಅದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದ್ರೆ, ನಮ್ಮ ಹೋರಾಟದ ಅಸ್ಮಿತೆ, ಸಂಘಟನೆಗಳ ವಿಚಾರ ಆಗಿರುವ ದಲಿತ ಪದ ಬದಲಾಯಿಸುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.
ಸರ್ಕಾರಿ ಆದೇಶದಲ್ಲಿ ದಲಿತ ಪದ ಬಳಕೆ ಮಾಡುವಂತಿಲ್ಲ. ಈ ಬಗ್ಗೆ ಹೈಕೋರ್ಟ್ ಆದೇಶವಿದೆ. ಆದ್ರೆ, ಸಂಘ, ಸಂಸ್ಥೆಗಳು, ಹೋರಾಟ ಮಾಡುವವರು ದಲಿತ ಪದ ಬಳಕೆ ಮಾಡಬಾರದು ಅನ್ನೋ ಆದೇಶವಿಲ್ಲವೆಂದು ಆಲ್ ಇಂಡಿಯಾ ದಲಿತರ ಆಕ್ಷನ್ ಕಮಿಟಿ ಅಧ್ಯಕ್ಷ ಚಿ.ನಾ ರಾಮು ಹೇಳಿದ್ದಾರೆ. ಹೀಗಾಗಿ ಡಿಸಿಎಂ ಗೋವಿಂದ ಕಾರಜೋಳ ಅವರ ಇಲಾಖೆ ಹೊರಡಿಸಿರುವ ಆದೇಶಕ್ಕೆ ಪರ ವಿರೋಧ ವ್ಯಕ್ತವಾಗಿದೆ.