ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಂಥನಾಳ ಮೂಲದ ರಾಚು ಕೊಪ್ಪ ಅವರು ವೃತ್ತಿಯಿಂದ ಸರ್ಕಾರಿ ಶಾಲೆ ಶಿಕ್ಷಕರು. ಕವಿತೆ, ಕಥೆಯೊಂದಿಗೆ ನಂಟು ಹೊಂದಿದವರು. ಇವರ ‘ದಸರೆ’ ಅನ್ನೋ ಕವಿತೆ ಇಂದಿನ ಕಾವ್ಯ ವಿಭಾಗದಲ್ಲಿ..
ಹಸಿರಿನಿಂದ ಉಸಿರಾಗಿ
ಬರುವಾಗ ಹೆಸರ ಹೇಳತೇವಿ ಮನದ ಮಾತ ಮರೆಯತೀವಿ.
ಗೂಡ ಕಟ್ಟತೀವಿ
ನಾಡ ನಡೆಯ ಸಾರಿ ಹೇಳತೀವಿ
ಇರುಸು ಮುರುಸು ಮರೆತು ಹೊಸ ಭಾಷ್ಯ ಬರೆಯತೀವಿ
ಬದುಕ ಬಂಡಿ ಹಾಗೆ ನೂಕತೀವಿ.
ನೆಲದ ನೆಲೆಯ ಹುಡಕತೀವಿ
ನೆನೆದು ನೆನೆದು ಹಾಡಿ ಹೇಳತೀವಿ
ಕುಣಿದು ಕುಣಿದು ದಣಿದು ದಾಹ ನೀಗತೀವಿ
ಬದುಕಿಗೆ ಭಾವ ತುಂಬತೀವಿ.
ಹಸಿರ ಸಿರಿಯ ಸೆರಗಿನಲ್ಲಿ
ಬನ್ನಿ ಬಂಗಾರ ಹಂಚತೀವಿ
ನಾಡ ಸಿರಿಯ ಸೊಬಗ
ಸಾರಿ ಹೇಳತೀವಿ
ಒಲುಮೆ ಕುಲುಮೆಯಲಿ
ಬೆಂದ ಜೀವ ಎಂದು
ಹಂಚಿ ಬದುಕತೀವಿ
ಎಲ್ಲರ ಹಿತವ ಕಾಯತೀವಿ
ದಸರೆಯ ಹೆಸರ ಹೇಳತೀವಿ
ನೀರ ಅಲೆಯ ನೆರಳ
ನಂಬತೀವಿ
ನಮ್ಮ ಪರಂಪರೆಯ ಬೆಳಕ ಚೆಲ್ಲತೀವಿ.