ಪ್ರಜಾಸ್ತ್ರ ಸುದ್ದಿ
ಸಿಂದಗಿ: ವಸತಿ ನಿಲಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಡಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಹೇಳಿದ್ರು. ಪಟ್ಟಣದಲ್ಲಿ ಸಹಾಯಕ ನಿರ್ದೇಶಕರ ಗ್ರೇಡ್ 1 ತಾಲೂಕು ಕಚೇರಿ ಹಾಗೂ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳ ಕಂಪ್ಯೂಟರ್ ಲ್ಯಾಬ್, ಅಭ್ಯಾಸ ಕೊಠಡಿಗಳ ಕಟ್ಟಡ ಉದ್ಘಾಟನೆ ಮಾಡಿ ಮಾತ್ನಾಡಿದ್ರು.
ವಸತಿ ನಿಲಯಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳೇ ವಂಚಿತರಾಗ್ತಿದ್ರು. ಹೀಗಾಗಿ ಹಾಸ್ಟೆಲ್ ಗಳಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇಕಡ 25ರಷ್ಟು ಮೀಸಲಾತಿ ನೀಡಲು ಆದೇಶಿಸಿದ್ದೇನೆ ಎಂದು ಡಿಸಿಎಂ ಕಾರಜೋಳ ಹೇಳಿದ್ರು. ಇಡೀ ದೇಶದಲ್ಲಿ ಜನಸಂಖ್ಯೆ ಆಧಾರದ ಮೇಲೆ ಅನುದಾನ ನೀಡುವ 2-3 ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದರು. ನಮ್ಮ ಇಲಾಖೆಯಿಂದ ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ 40 ಲಕ್ಷ ವಿದ್ಯಾರ್ಥಿಗಳು ಊಟ, ವಸತಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇತರೆ ವಿದ್ಯಾರ್ಥಿಗಳ ಎಸ್ಎಸ್ಎಲ್ ಸಿ ಫಲಿತಾಂಶಕ್ಕಿಂತ, ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳ ಫಲಿತಾಂಶದ ಗುಣಮುಟ್ಟ ಉತ್ತಮವಾಗಿದೆ ಎಂದರು.
ತಾಲೂಕಿನ ಜನಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನ ಒದಗಿಸಿ ಕೊಡುವ ಕೆಲಸ ಮಾಡ್ತಿದ್ದಾನೆ. ಅನುದಾನವನ್ನ ತಂದು ಎಲ್ಲ ವರ್ಗದ ಜನರಿಗೆ ಅನುಕೂಲವಾಗುವ ಕೆಲಸ ಮಾಡ್ತಿದ್ದು, ಸರ್ಕಾರದಿಂದಲೂ ಒಳ್ಳೆಯ ಬೆಂಬಲ ಸಿಗ್ತಿದೆ ಎಂದು ಶಾಸಕ ಎಂ.ಸಿ ಮನಗೂಳಿ ಹೇಳಿದ್ರು. ನಾನು ಸೋರುವ ಮನೆಯಲ್ಲಿ ಕುಳಿತೆ. ಅವರು(ಗೋವಿಂದ ಕಾರಜೋಳ) ಗಟ್ಟಿ ಮನೆಯಲ್ಲಿ ಕುಳಿತರು ಎಂದು ಮಾರ್ಮಿಕವಾಗಿ ಹೇಳಿದ್ರು.
ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಮಾತ್ನಾಡಿದ್ರು.
ಇದೇ ವೇಳೆ ಹಂದಿಗನೂರು ಸಿದ್ರಾಮಪ್ಪ ಸಮಿತಿಯಿಂದ ಮನವಿ ಸಲ್ಲಿಸಲಾಯ್ತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸುಜಾತ ಕಳ್ಳಮನಿ, ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಸಿಂದಗಿ ತಾ.ಪಂ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷ ಪ್ರಕಾಶ ಪಡಶೆಟ್ಟಿ, ಉಪವಿಭಾಗಾಧಿಕಾರಿ ಸ್ನೇಹಲ ಲೋಖಂಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ರು.