ಮಡಿಕೇರಿ: ಮಗುವಿಗೆ ಸೋಂಕು ತಗುಲುತ್ತೆ ಅನ್ನೋ ಭಯದಲ್ಲಿ ಹೆರಿಗೆಯಾದ ತಾಯಿ ಹಾಗೂ ಮಗುವಿನ ಬಳಿ ನರ್ಸ್ ಬಿಟ್ರೆ ಯಾರೂನ್ನೂ ಬಿಟ್ಟಿಲ್ಲ. ಇದರ ಪರಿಣಾಮ 4 ದಿನದ ಹಸುಗೂಸು ಪ್ರಾಣ ಕಳೆದುಕೊಂಡ ಘಟನೆ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ದೊಡ್ಡಕಮರಹಳ್ಳಿ ಗ್ರಾಮದ ಮಂಜುಳ-ಚನ್ನಬಸಪ್ಪ ದಂಪತಿಯ ಮಗಳು ಹೆರಿಗೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಹರಿಗೆ ಮಾಡಲಾಗಿದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ನರ್ಸ್ ತಿಳಿಸಿದ್ದಾರೆ. ಆದ್ರೆ, ಮಗುವಿಗೆ ಸೋಂಕು ತಗುಲುವ ಭೀತಿಯಿಂದ ತಾಯಿ ಮಗುವಿನ ಬಳಿ ಯಾರನ್ನೂ ಬಿಟ್ಟಿಲ್ಲ. ಸೆಕ್ಯೂರಿಟಿ ಗಾರ್ಡ್ ಹಾಗೂ ನರ್ಸ್ ಯಾರನ್ನೂ ಬಾಣಂತಿಯಿದ್ದ ರೂಮಿಗೆ ಬಿಡದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ಹೇಳಲಾಗ್ತಿದೆ.
ಮೊದಲೇ ಸಿಸೇರಿಯನ್ ಆದ ಲಕ್ಷ್ಮಿಗೆ ಮಗುವಿಗೆ ಸರಿಯಾಗಿ ಹಾಲೂಣಿಸಲು ಆಗಿಲ್ಲ. ಹೀಗಾಗಿ ನಾಲ್ಕು ದಿನದ ಮಗುವಿಗೆ ಹಾಲು ನೆತ್ತಿಗೇರಿ ಉಸಿರುಗಟ್ಟಿ ಸಾವನ್ನಪ್ಪಿದೆ. ಸಿಸೇರಿಯನ್ ಆದ ಮಗಳ ಬಳಿ ನಮ್ಮನ್ನೂ ಬಿಟ್ಟಿಲ್ಲ. ನರ್ಸ್ ಗಳು ಸರಿಯಾಗಿ ನೋಡಿಕೊಂಡಿಲ್ಲ. ಹೀಗಾಗಿ ನಾವು ಮಗುವನ್ನ ಕಳೆದುಕೊಂಡಿದ್ದೇವೆ ಎಂದು ಬಾಣಂತಿ ಲಕ್ಷ್ಮಿ ಪೋಷಕರು ಆರೋಪಿಸಿದ್ದಾರೆ. ಮಗು ಕಳೆದುಕೊಂಡ ತಾಯಿ ಆಕ್ರಂದನ ನೋಡಲಾಗದು.