ಚಿಕ್ಕಮಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಚಿಕ್ಕಮಗಳೂರು ತಾಲೂಕಿನ ಬಿಂಡಗಿ ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವಿರಮ್ಮನ ಜಾತ್ರೆ ನಡೆಯುತ್ತೆ. ಈ ವೇಳೆ ಕಾಲ್ನಡಿಗೆಯ ಮೂಲಕ ಬೆಟ್ಟ ಹತ್ತುವುದು ರೂಢಿ. ಇದರಲ್ಲಿ ಈ ಬಾರಿ ಸಣ್ಣ ಬದಲಾವಣೆ ಮಾಡಲಾಗಿದೆ.
ಇಂದು ರಾತ್ರಿಯೇ ಭಕ್ತರು ಬೆಟ್ಟವನ್ನ ಹತ್ತಬೇಕಿತ್ತು. ಆದ್ರೆ, ಅಪಾರ ಪ್ರಮಾಣದಲ್ಲಿ ಮಳೆಯಾಗಿರುವುದ್ರಿಂದ ಬೆಟ್ಟವನ್ನ ಹತ್ತಬೇಡಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ದೇವಿರಮ್ಮನ ಬೆಟ್ಟವು ಕಡಿದಾಗಿದೆ. ಇಳಿಜಾರಿನಿಂದ ಕೂಡಿದೆ. ಜನಸಂದಣೆ ಹೆಚ್ಚಾದಂತೆ ಭೂಕುಸಿತವಾಗುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಹವಾಮಾನ ಇಲಾಖೆ ಸಹ ಎಚ್ಚರಿಕೆ ನೀಡಿದೆ. ಮಳೆನೀರಿನಿಂದ ಕಾಲುದಾರಿ ಸಡಿಲಗೊಂಡು ಕುಸಿಯುವ ಸಾಧ್ಯತೆ ಇರುತ್ತೆ. ಹೀಗಾಗಿ ರಾತ್ರಿ ಬೆಟ್ಟ ಹತ್ತುವುದು ಸುರಕ್ಷಿತವಲ್ಲ ಎಂದು ಡಿಸಿ ಬಗಾದಿ ಗೌತಮ ಸೂಚನೆ ನೀಡಿದ್ದಾರೆ.
ಭಕ್ತಾದಿಗಳು 26ರ ರಾತ್ರಿ ಬೆಟ್ಟ ಹತ್ತುವ ಬದಲು 27ರ ಬೆಳಗ್ಗೆ ಹತ್ತಬಹುದು. ಈ ಬಗ್ಗೆ ದೇವಸ್ಥಾನದ ಮಂಡಳಿ ಭಾನುವಾರ ಬೆಳಗ್ಗೆಯಿಂದ ಬೆಟ್ಟ ಹತ್ತಬಹುದು ಅಂತಾ ಹೇಳಿದೆ. ಮಕ್ಕಳು, ವೃದ್ಧರು, ಅನಾರೋಗ್ಯದಿಂದ ಕೂಡಿರುವವರು ಬೆಟ್ಟ ಹತ್ತದೆ ಇರುವುದು ಉತ್ತಮ ಅಂತಾ ಹೇಳಲಾಗಿದೆ.