ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪ ವಿರುದ್ಧ ಬಿಜೆಪಿ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಪಕ್ಷದಿಂದ ಉಚ್ಛಾಟಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಈಶ್ವರಪ್ಪ, ನಾನು ಮೊದಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯಾಕಂದರೆ ಶಿವಮೊಗ್ಗದ ಪ್ರಮುಖರಿಗೆ ನಾನು ಚುನಾವಣೆಗೆ ನಿಲ್ಲುತ್ತೇನೆ ಎನ್ನುವುದು ಸ್ಪಷ್ಟವಾಯಿತು ಎಂದರು.
ಅದೆ ವಿಜಯೇಂದ್ರ, ರಾಘವೇಂದ್ರ, ಯಡಿಯೂರಪ್ಪ ದಿನಾ ಗೊಂದಲ ಮಾಡುತ್ತಿದ್ದರು. ಅವರು ಹೇಳ್ತಾರೆ. ಇವರು ಹೇಳ್ತಾರೆ. ಅವರು ಬಿಜೆಪಿ ಹಿರಿಯ ನಾಯಕರಿದ್ದಾರೆ ಎಂದು ಹೇಳಿ ಹೇಳಿ ಗೊಂದಲ ಸೃಷ್ಟಿ ಮಾಡ್ತಿದ್ದರು. ಈಗ ಎಲ್ಲರಿಗೂ ಸ್ಪಷ್ಟಪಡಿಸಿದ್ದಾರೆ. ಈ ಉಚ್ಛಾಟನೆ ತುಂಬಾ ತಾತ್ಕಾಲಿಕ. ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎನ್ನುವ ವಿಶ್ವಾಸವಿದೆ. ಬೇಡ ಅಂದರೂ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಮತ್ತೆ ನಾನು ಬಿಜೆಪಿ ಸೇರಿಕೊಳ್ಳುತ್ತೇನೆ. ಮೋದಿಯವರಿಗೆ ಕೈ ಎತ್ತುತ್ತೇನೆ. ಇದರಲ್ಲಿ ಯಾವ ಅನುಮಾನವೂ ಬೇಡ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಅವರ ಮನೆಗೆ ಹೋಗಿ ಕಾಲ ಹಿಡಿದು ವಾಪಸ್ ಕರಕೊಂಡು ಬಂದು ಯಡಿಯೂರಪ್ಪನವರು ಬೆಳಗಾವಿ ಟಿಕೆಟ್ ಕೊಟ್ಟಿದ್ದಾರೆ. ನಾನು ಎಂದೂ ಪಕ್ಷ ಬಿಟ್ಟು ಹೋದವನಲ್ಲ. ಅಪ್ಪ, ಮಕ್ಕಳ ಕುತಂತ್ರದಿಂದ ಹೊರಗೆ ಇದ್ದೇನೆ. ಅವರಿಗೆ ಬಹಳ ದಿನದಿಂದ ಹೊರಗೆ ಹಾಕಬೇಕಂತ ಇತ್ತು. ಇವತ್ತು ಸ್ವಲ್ಪ ಸಮಧಾನವಿದೆ. 40 ವರ್ಷ ಪಕ್ಷ ಕಟ್ಟಿಕೊಂಡು ಬಂದಿದ್ದೀರಿ. ಎಳಸು ರಾಜ್ಯಾಧ್ಯಕ್ಷ. ತಂದೆಯ ಪ್ರಭಾವದಿಂದ ರಾಜ್ಯಾಧ್ಯಕ್ಷರಾಗಿ ನಿಮ್ಮನ್ನು ಉಚ್ಛಾಟನೆ ಮಾಡಿದ್ದು ನೋವು ತಂದಿದೆ ಅಂತಾ ಎಲ್ಲರೂ ಫೋನ್ ಮಾಡಿ ಹೇಳ್ತಿದ್ದಾರೆ ಎಂದರು.