ಪ್ರಜಾಸ್ತ್ರ ಸುದ್ದಿ
ದೇವರ ಹಿಪ್ಪರಗಿ: ಆಕಸ್ಮಿಕ ಬೆಂಕಿ ಅನಾಹುತದಿಂದಾಗಿ ತೋಟದ ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹತ್ತಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಯಲಗೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೊಸಿನಪಟೇಲ್ ಹುಸೇನಪಟೇಲ್ ಕಣಮೇಶ್ವರ ಎಂಬುವರ ತೋಟದ ಮನೆಯಲ್ಲಿ ಈ ಅನಾಹುತ ನಡೆದಿದೆ.
ಭಾನುವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆಕಸ್ಮಿಕ ಬೆಂಕಿ ಬಿದ್ದು ಸುಮಾರು 150ಕ್ಕೂ ಹೆಚ್ಚು ಹತ್ತಿ ಚೀಲಗಳು ಸುಟ್ಟು ಹೋಗಿವೆ. ಅದೃಷ್ಟವಶಾತ್ ಜಾನುವಾರುಗಳಿಗೆ ಯಾವುದೇ ಅನಾಹುತವಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲವೆಂದು ರೈತ ಕಣ್ಣೀರು ಹಾಕುತ್ತಿರುವಾಗ, ಇಂತಹ ಅನಾಹುತಗಳು ಆತನನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತವೆ. ಹೀಗಾಗಿ ಈ ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ರೈತನಿಗೆ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.