ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದ ರೈತ ಸಂಜಯಕುಮಾರ ಭವಾನೆಪ್ಪ ಮಾಶ್ಯಾಳ(34) ಮಂಗಳವಾರ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಜಾನೆ 8ರಿಂದ ಸಂಜೆ 4ಗಂಟೆಯ ನಡುವಿನ ಸಮಯದಲ್ಲಿ ಘಟನೆ ನಡೆದಿದೆ. ಆರಂಭದಲ್ಲಿ ಸಿಂದಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿಜಯಪುರಕ್ಕೆ ಕರೆದುಕೊಂಡು ಹೋಗುವ ವೇಳೆ, ಮಾರ್ಗಮಧ್ಯ ಸಂಜೆ ಸುಮಾರು 6.30ರ ಸಮಯದಲ್ಲಿ ದೇವರ ಹಿಪ್ಪರಗಿ ಹತ್ತಿರ ಮೃತಪಟ್ಟಿದ್ದಾನೆ ಎಂದು ತಿಳಿಸಲಾಗಿದೆ.
ಜಮೀನು ಸಲುವಾಗಿ ಮಾಡಬಾಳದ ಪಿಕೆಪಿಎಸ್ ಬ್ಯಾಂಕಿನಲ್ಲಿ 2 ಲಕ್ಷ ರೂಪಾಯಿ, ಸಿಂದಗಿಯ ಕೆನರಾ ಬ್ಯಾಂಕಿನಲ್ಲಿ 3.5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ನಾಲ್ಕು ಬೋರ್ ವೇಲ್ ಕೊರೆಸಿದರು ನೀರು ಬಿದ್ದಿರಲಿಲ್ಲ. ಮಳೆ, ಬೆಳೆ ಕೈ ಕೊಟ್ಟಿದ್ದರಿಂದ ಸಾಲದ ಹೊರೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ಪತ್ನಿ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.