ಸಿಂದಗಿ: ಗಾಂಧಿ ಅವರ 150ನೇ ಜನ್ಮ ದಿನಾಚರಣೆ ನಿಮಿತ್ತ, ಪಟ್ಟಣದ ಜಿ.ಪಿ ಪೋರವಾಲ ಕಲಾ, ವಾಣಿಜ್ಯ ಮತ್ತು ವಿ.ವಿ ಸಾಲಿಮಠ ವಿಜ್ಞಾನ ಕಾಲೇಜಿನ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ಫಿಲಾಸೊಫಿಕಲ್ ಯೂತ್ ಫೋರಂ ವಿಜಯಪುರ ವತಿಯಿಂದ ವಿಶೇಷ ಉಪನ್ಯಾಸ, ಚಿತ್ರ ಪ್ರದರ್ಶನ ಹಾಗೂ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹಾತ್ಮ ಗಾಂಧಿ ಫಿಲಾಸೊಫಿಕಲ್ ಯೂತ್ ಫೋರಂನ ಅಧ್ಯಕ್ಷರಾದ ನೇತಾಜಿ ಗಾಂಧಿ ವಿಶೇಷ ಉಪನ್ಯಾಸ ನೀಡಿದ್ರು. ದಕ್ಷಿಣ ಆಫ್ರಿಕಾದಿಂದ ಶುರುವಾದ ಗಾಂಧೀಜಿ ಅವರ ಹೋರಾಟದ ಬದುಕಿನ ಹಲವು ಮಜಲುಗಳನ್ನ ತಿಳಿಸಿದ್ರು. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಮಾಡಿದ ಹೋರಾಟ, ಭಾರತ ಸ್ವಾತಂತ್ರ್ಯ ಹೊಂದಬೇಕಾದ್ರೆ ಹಿಂದೂ ಮುಸ್ಲಿಂರನ್ನ ಒಂದು ಮಾಡಬೇಕು ಅನ್ನೋದನ್ನ ಅರಿತ ಅವರು, ಅದಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ್ರು ಅಂತಾ ತಿಳಿಸಿದ್ರು.
ಅಹಿಂಸೆಯ ಅಸ್ತ್ರದಿಂದ ವಿಶ್ವದ ಪ್ರತಿಯೊಂದು ರಾಷ್ಟ್ರಗಳಲ್ಲಿ ಗೌರವಿಸುವ, ಇಷ್ಟಪಡುವ ಶಕ್ತಿಯಾದ್ರು. ಬರೋಬ್ಬರಿ 32 ಸಾವಿರಕ್ಕೂ ಹೆಚ್ಚು ಲೇಖಕರು ಗಾಂಧಿ ಬಗ್ಗೆ ಪುಸ್ತಕಗಳನ್ನ ಬರೆದ್ರು. ರಕ್ತರಹಿತ ಸತ್ಯಾಗ್ರಹ ಕಲಿಸಿದ ಗಾಂಧಿ, ಅದ್ಹೇಗೆ ಮಹಾತ್ಮನಾದ್ರು ಅನ್ನೋದನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ರು.
ಇನ್ನು ರಸಪ್ರಶ್ನೆ ಸ್ಪರ್ಧೆಯಲ್ಲಿ ಪೃಥ್ವಿ ಬಿರಾದಾರ ಪ್ರಥಮ, ಅಕ್ಷತಾ ಮನಗೂಳಿ ದ್ವಿತೀಯ ಹಾಗೂ ಶ್ರೀಶೈಲ ಗಬ್ಬೂರು ತೃತೀಯ ಸ್ಥಾನ ಪಡೆದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಾಲೇಜಿನ ಪ್ರಾಚಾರ್ಯರಾದ ಆರ್.ಎಸ್ ಭೂಶೆಟ್ಟಿ ವಹಿಸಿಕೊಂಡಿದ್ರು. ಎಸ್.ಐ ಭಂಡಾರಿ ಅವರು ಸ್ವಾಗತ ಮತ್ತು ಪರಿಚಯ ಭಾಷಣ ಮಾಡಿದ್ರು. ಮಹೇಶ ರೋಡಗಿ ವಂದಿಸಿದ್ರು.