ಬೆಂಗಳೂರು: ಕಳೆದ ಭಾನುವಾರ ಹತ್ಯೆಯಾದ ರಾಜಾಜಿನಗರದ ಬಟ್ಟೆ ವ್ಯಾಪಾರಿ ಜೈಕುಮಾರ ಜೈನ್ ಎಂಬುವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಬಯಲಾಗ್ತಿದ್ದಂತೆ, ಹಂತಕಿಯ ಮುಖವಾಡ ಒಂದೊಂದಾಗಿ ಕಳಚಿ ಬೀಳುತ್ತಿದೆ.
ಹೈಸ್ಕೂಲ್ ಓದುತ್ತಿದ್ದ 15 ವರ್ಷದ ಆಕೆ, ಮಾಡಲಿಂಗ್ ಲೋಕದ ಬಗ್ಗೆ ಆಸಕ್ತಿ ಹೊಂದಿದ್ದಳು. ಹೀಗಾಗಿ ಮನೆಯಲ್ಲಿ ಸುಳ್ಳು ಹೇಳಿ ಪ್ರಿಯಕರ ಪ್ರವೀಣ ಜೊತೆ ಕಳೆದ ತಿಂಗಳು ಮುಂಬೈಗೆ ಹೋಗಿದ್ದಳು. ಬಳಿಕ ತಾಯಿಗೆ ಫೋನ್ ಮಾಡಿ ವಿಷ್ಯ ತಿಳಿಸಿದ್ಳು. ಇದು ತಂದೆಗೆ ಗೊತ್ತಾಗಿದೆ. ನಾಲ್ಕು ದಿನದ ಬಳಿಕ ವಾಪಸ್ ಬಂದ ಮಗಳಿಗೆ ಬುದ್ದಿವಾದ ಹೇಳಿದ ತಂದೆ ಮೊಬೈಲ್ ಕಿತ್ತುಕೊಂಡಿದ್ರು.
ಯಾವಾಗ ತಂದೆಯಿಂದ ಕಟ್ಟೆಚ್ಚರವಾಯ್ತೋ, ಆಕೆ ದ್ವೇಷ ಬೆಳೆಸಿಕೊಂಡಿದ್ದಾಳೆ. ಹೇಗಾದ್ರೂ ಮಾಡಿ ತಂದೆಯನ್ನೆ ಇಲ್ಲವಾಗಿಸಬೇಕೆಂದು ನಿರ್ಧರಿಸಿದ್ದಾಳೆ. ಹೀಗಾಗಿ ತಾಯಿ ಪೂಜಾದೇವಿ ಮತ್ತು ತಮ್ಮ ಊರಿಗೆ ಹೋದ ದಿನವನ್ನ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾಳೆ. ವ್ಯಾಪಾರ ಮಾಡಿ ರಾತ್ರಿ ಮನೆಗೆ ಬಂದ ತಂದೆಗೆ ಜ್ಯೂಸ್ ಕೊಟ್ಟಿದ್ದಾಳೆ. ಆದ್ರೆ, ಆ ಜ್ಯೂಸಿನಲ್ಲಿ ನಿದ್ದೆ ಮಾತ್ರೆ ಹಾಕಿದ್ದಾಳೆ ಅನ್ನೋದು ತಂದೆಗೆ ಗೊತ್ತಿಲ್ಲ. ಕುಡಿದು ಮಲಗಿದ್ದಾನೆ. ಬಳಿಕ ಪ್ರಿಯಕರನಿಗೆ ಫೋನ್ ಮಾಡಿ ಕರೆಸಿಕೊಂಡು ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.
ರಕ್ತ ಹತ್ತಿದ ಬಟ್ಟೆ ಹೇಳಿದ ಸತ್ಯ
ಹೆತ್ತ ತಂದೆಯನ್ನ ಹತ್ಯೆ ಮಾಡಿದ ಹಂತಕಿ ಮತ್ತು ಆತನ ಪ್ರಿಯಕರನ ಬಟ್ಟೆಗೆ ರಕ್ತ ಮೆತ್ತಿಕೊಂಡಿದೆ. ಅದನ್ನ ವಾಷಿಂಗ್ ಮಷಿನ್ ನಲ್ಲಿ ಹಾಕಿ ತೊಳೆದಿದ್ದಳು. ನಂತ್ರ ಅದನ್ನ ಒಣ ಹಾಕಿದ್ಳು. ಸ್ಥಳಕ್ಕೆ ಹೋದ ಪೊಲೀಸ್ರಿಗೆ ಆ ಬಟ್ಟೆ ಕಣ್ಣಿಗೆ ಬಿದ್ದಿದೆ. ಅದ್ರಿಂದ ಕೊಲೆಯ ಸುಳಿವು ಸಿಕ್ಕಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.
8 ಲೀಟರ್ ಪೆಟ್ರೋಲ್ ತಂದಿದ್ದ ಹಂತಕರು
ಆರೋಪಿಗಳಿಬ್ಬರು ಸೇರಿಯೇ ನಾಲ್ಕು ನೀರಿನ ಬಾಟಲ್ ಗಳಲ್ಲಿ 8 ಲೀಟರ್ ಪೆಟ್ರೋಲ್ ತಂದಿದ್ರು. ಜೈಕುಮಾರ ಜೈನ್ ಹತ್ಯೆ ಬಳಿಕ ಅವನನ್ನ ಸುಟ್ಟಿದ್ರು. ಬಳಿಕ ಮನೆ ಮೇಲೆ ನಿಂತು ಬೆಂಕಿ ಬೆಂಕಿಯೆಂದು ಚೀರಿಕೊಂಡಿದ್ದಳು. ಇಷ್ಟೆಲ್ಲ ಮಾಡಿದ ಆರೋಪಿಗಳ ಮೈಗಳಿಗೆ ಬೆಂಕಿಯಿಂದ ಸಣ್ಣಪುಟ್ಟ ಗಾಯಗಳಾಗಿದ್ವು. ಇದು ಸಹ ಪೊಲೀಸ್ರಿಗೆ ಸುಳಿವು ನೀಡಿತು.
ಬಡ್ಡಿಯಿಂದ ಜೀವನ
ಕೆ.ಪ್ರಕಾಶ ಮತ್ತು ಪ್ರತಿಮಾ ದಂಪತಿಯ ಮಗನಾಗಿರುವ ಆರೋಪಿ ಪ್ರವೀಣನನ್ನ ಮುದ್ದಾಗಿ ಸಾಕಿದ್ರು. ಪ್ರಕಾಶ ಕೆಲಸ ಮಾಡ್ತಿದ್ದ ಖಾಸಗಿ ಕಂಪನಿ ಬೇರೊಂದು ಕಂಪನಿಗೆ ಮಾರಿದಾಗ ಕೆಲವರನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಅದ್ರಲ್ಲಿ ಪ್ರಕಾಶ ಸಹ ಒಬ್ಬರು. ಆಗ ಅವರಿಗೆ ಕಂಪನಿಯಿಂದ ಬಂದಿದ್ದ ಹಣವನ್ನ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದ್ರು. ಅದ್ರಿಂದ ಬರ್ತಿದ್ದ ಬಡ್ಡಿಯಲ್ಲಿ ಜೀವನ ಮಾಡ್ತಿದ್ರು.
ಪ್ರವೀಣ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅಪ್ರಾಪ್ತೆಯಾಗಿರುವ ಕಾರಣ ಬಾಲಕಿಯನ್ನ ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಇರಸಲಾಗಿದ್ದು, ಅಲ್ಲಿಂದಲೇ ಮಂಗಳವಾರ ಕೋರ್ಟ್ ಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಆರೋಪಿಗಳು ತಪ್ಪೊಪ್ಪಿಗೆ ಕೊಂಡಿದ್ದಾರೆ ಅನ್ನೋದು ತಿಳಿದು ಬಂದಿದೆ.