ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಬಸವನಬಾಗೇವಾಡಿ: ಪತ್ನಿಯ ಮೇಲೆ ಅನುಮಾನ ಪಟ್ಟು ಆಕೆಯನ್ನೂ ಸೇರಿದಂತೆ ಇಬ್ಬರು ಮಕ್ಕಳು ಹಾಗೂ ಹೆತ್ತವರ ಮೇಲೆಯೇ ಸರ್ಕಾರಿ ಶಾಲಾ ಶಿಕ್ಷಕನೊಬ್ಬ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೇವರಹಿಪ್ಪರಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ನಡೆದಿದೆ.
ಆರೋಪಿ ಸಿದ್ರಾಮಪ್ಪ ದತ್ತಪ್ಪ ಮುಳಸಾವಳಗಿ(50) ಅನ್ನೋ ಶಿಕ್ಷಕ ಕಳೆದ ಜನವರಿ 29ರ ರಾತ್ರಿ ಸುಮಾರು 9.30ರ ಸಮಯದಲ್ಲಿ ಪತ್ನಿ ರೇಣುಕಾಳ ಕೊಲೆಗೆ ಸಂಚು ರೂಪಿಸಿ, ಕಬ್ಬಿಣದ ಹಾರಿಯಿಂದ ಗಂಭೀರ ಸ್ವರೂಪದ ಹಲ್ಲೆ ಮಾಡಿದ್ದಾನೆ ಎಂದು, ರೇಣುಕಾ ಸಹೋದರ ಪರಶುರಾಮ ಮಲಕನಗೌಡ ಪಾಟೀಲ ಎಂಬುವರು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಹಿನ್ನಲೆ
ಆರೋಪಿ ಶಿಕ್ಷಕ ಸಿದ್ರಾಮಪ್ಪ ಕಳೆದ 2 ವರ್ಷಗಳಿಂದ ಹೆಂಡ್ತಿಯ ಮೇಲೆ ಅನುಮಾನ ಪಟ್ಟು ಕಿರುಕುಳ ನೀಡುತ್ತಾ ಬಂದಿರುತ್ತಾನಂತೆ. ಹೀಗಿರುವಾಗ ಕಳೆದ ಜನವರಿ 29ರ ರಾತ್ರಿ 9.30ರ ಸುಮಾರಿನಲ್ಲಿ ದಿಢೀರ್ ಎಂದು ಪತ್ನಿ ಕೊಲೆಗೆ ಸಂಚು ರೂಪಿಸಿ ಗಂಭೀರ ಸ್ವರೂಪದ ಹಲ್ಲೆ ಮಾಡಿದಿದ್ದಾನೆ. ಈ ವೇಳೆ ಬಿಡಿಸಲು ಬಂದ ತಂದೆ, ತಾಯಿ ಹಾಗೂ 10 ವರ್ಷದ ಇಬ್ಬರು ಹೆಣ್ಮಕ್ಕಳ ಮೇಲೆಯೂ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಘಟನೆ ಬಗ್ಗೆ ನನ್ಗೆ ಪ್ರಾಥಮಿಕ ಮಾಹಿತಿ ಬಂದಿದೆ. ದುರ್ಘಟನೆ ನಡೆದಿದೆ ಅನ್ನೋದು ತಿಳಿದು ಬಂದಿದೆ. ಇದು ವಿಷಾದನೀಯ. ಶಿಕ್ಷಕನಾಗಿ ಹೀಗೆ ಮಾಡಿರುವುದು ಅನಾಗರೀಕ ಕೆಲಸ. ಈ ಬಗ್ಗೆ ಅವನ ವಿರುದ್ಧ ಯಾರಾದ್ರೂ ದೂರು ನೀಡಿದ್ದರೆ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ.
ಬಸವರಾಜ ಎಸ್. ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ, ಬಸವನಬಾಗೇವಾಡಿ
ಕುಟುಂಬಸ್ಥರ ಆಕ್ರಂದನ ಕೇಳಿ ಮನೆಗೆ ಬಂದ ಗ್ರಾಮಸ್ಥರು, ತೀವ್ರವಾಗಿ ಗಾಯಗೊಂಡಿದ್ದ ಐವರನ್ನ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂತಹ ಹೀನ ಕೃತ್ಯವೆಸಗಿರುವ ಶಿಕ್ಷಕ ದೇವರಹಿಪ್ಪರಗಿ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷನಾಗಿದ್ದಾನೆ. ಇವನ ಕೃತ್ಯದಿಂದಾಗಿ ಶಿಕ್ಷಕ ಸಮುದಾಯ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.