ಕೊಪ್ಪಳ/ಗಜೇಂದ್ರಗಡ: ಧರ್ಮವೆಂಬುದು ಸರಳ, ಸುಂದರ. ಅದನ್ನ ಧಾರ್ಮಿಕ ವಿಧಿ, ವಿಧಾನಗಳ ಮೂಲಕವೇ ದೇವನನ್ನ ಒಲಿಸಿಕೊಳ್ಳುವ ಏಕೈಕ ಮಾರ್ಗವಲ್ಲ. ಉತ್ತಮವಾಗಿ ಬದುಕಿದರೆ ಅದೂ ಕೂಡ ಧರ್ಮ ಪಾಲನೆಯ ಹಾದಿ ಅಂತಾ, ಗಜೇಂದ್ರಗಡ ಠಾಣೆ ಪಿಎಸ್ಐ ಆರ್. ವೈ ಜಲಗೇರಿ ಹೇಳಿದರು.
ಪಟ್ಟಣದ ಕುಷ್ಟಗಿ ರಸ್ತೆ ಬಳಿ ಅಂಜುಮನ್ ಇಸ್ಲಾಂ ಕಮಿಟಿ, ಜಮಾಲ ಶಾವಲಿ ನೌಜವಾನ್ ಕಮಿಟಿ ಸಂಯುಕ್ತಾಶ್ರಯದಲ್ಲಿ ಹಜರತ್ ಸೈಯ್ಯದಶಾ ಜಮಾಲ ಶಾವಲಿ ಖಾದ್ರಿಯವರ ಉರುಸು ನಡೆಯಿತು. ಈ ವೇಳೆ ಮಾತನಾಡಿ ಪಿಎಸ್ಐ ಜಲಗೇರಿ, ಸರ್ವ ಧರ್ಮಗಳು ಸಂಬಂಧ ಬೆಸೆಯುವ ಮೂಲಕ ಒಂದಾಗಿ ನಡೆಯುವುದು ಅವಶ್ಯವಾಗಿದೆ ಅಂತಾ ಹೇಳಿದ್ರು.
ದೇವರು ಮನುಷ್ಯನನ್ನ ಮಾತ್ರ ಹುಟ್ಟಿಸಿದ್ದಾನೆ. ಆದರೆ, ಮನುಷ್ಯ ಜಾತಿ ಹಾಗೂ ಧರ್ಮ ಹುಟ್ಟುಹಾಕಿ ಗೊಂದಲ ಸೃಷ್ಟಿಸಿದ್ದಾನೆ. ಹಿಂದು ಧರ್ಮಿಯರಲ್ಲಿ ದಾಸರ ಪರಂಪರೆಯಂತೆ ಮುಸ್ಲಿಂ ಧರ್ಮೀಯರಲ್ಲಿಯೂ ಧರ್ಮ ಜಾಗೃತಿ ಮೂಡಿಸಿದ ಖ್ಯಾತಿ ಸೂಫಿ, ಸಂತರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ತಾವು ಆಚರಿಸುವ ಧರ್ಮ ಗುರುಗಳ ಭೋಧನೆಯನ್ನು ಅರ್ಥೈಸಿಕೊಂಡು ಸರ್ವಧರ್ಮಿಯರೊಂದಿಗೆ ಹೊಂದಾಣಿಕೆ ಜೀವನ ಕೈಗೊಂಡಲ್ಲಿ ಮಾತ್ರ ಸಾರ್ಥಕ ಜೀವನ ಪಡೆಯಲು ಸಾಧ್ಯ ಎಂದರು.
ಶುಕ್ರವಾರ ರಾತ್ರಿ ವಿಶೇಷ ಪೂಜಾ ಕೈಂಕರ್ಯ ಮೂಲಕ ಗಂಧಾಭಿಷೇಕ ನಡೆಯಿತು. ಉರುಸಗೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸರ್ವ ಧರ್ಮಿಯ ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ರು. ಮಧ್ಯಾಹ್ನ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.