ಪ್ರಜಾಸ್ತ್ರ ಸುದ್ದಿ
ಮೈಸೂರು: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಭರ್ಜರಿಯಾಗಿ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 1 ರಿಂದ 10ನೇ ತರಗತಿ ಶಾಲೆಗಳಿಗೆ ರಜೆ ನೀಡಲಾಗಿದೆ. ಈ ಬಗ್ಗೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ತಿಳಿಸಿದ್ದಾರೆ.
ಭಾರೀ ಮಳೆಯಿಂದ ನಗರ ಸೇರಿದಂತೆ ಜಿಲ್ಲೆಯ ಅನೇಕ ಕಡೆ ಸಾಕಷ್ಟು ಹಾನಿಯಾಗಿದೆ. ಮರಗಳು ಬಿದ್ದಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಮನೆಗಳು, ಶಾಲೆಗಳು, ದೇವಸ್ಥಾನಗಳು ಕೆಲವು ಕಡೆ ಜಲಾವೃತಗೊಂಡಿವೆ.
ವಿದ್ಯಾರಣ್ಯಪುರಂ 4ನೇ ಮೇನ್ 2ನೇ ಕ್ರಾಸ್ ನಲ್ಲಿ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದಿದೆ. ಹೀಗಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಮಳೆಯಿಂದಾಗಿ ದೇವರಾಜ ಮಾರುಕಟ್ಟೆ, ಮಂಡಿ ಮಾರುಕಟ್ಟೆ, ಎಂ.ಜಿ ರಸ್ತೆ ಮಾರುಕಟ್ಟೆಗಳಲ್ಲಿ ವ್ಯಾಪಾರ ಸಂಪೂರ್ಣ ಕುಸಿತಕಂಡಿದೆ. ಇಂದು ಒಂದು ದಿನ ಶಾಲೆಗೆ ರಜೆ ಘೋಷಿಸಿದ್ದು, ಮುಂದಿನ ಪರಿಸ್ಥಿತಿ ನೋಡಿಕೊಂಡು ರಜೆ ಬಗ್ಗೆ ತಿಳಿಸಬಹುದಾಗಿದೆ.