ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಹಡಗು ನಡೆಸುವ ನಾವಿಕನಿಲ್ಲದ ಸ್ಥಿತಿ ಇದೆ. ಚುನಾವಣೆಯಲ್ಲಿ ಸೋತ ಬಳಿಕ ಹೈಕಮಾಂಡ್ ಇತ್ತ ಕಡೆ ತಲೆನೂ ಹಾಕಿ ಮಲುಗುತ್ತಿಲ್ಲ. ಹೀಗಾಗಿ ಘಟಾನುಘಟಿ ನಾಯಕರೂ ಮುಜುಗರ ಅನುಭವಿಸುವಂತಾಗಿದೆ. ವಿಪಕ್ಷ ನಾಯಕನಿಲ್ಲ. ರಾಜ್ಯಾಧ್ಯಕ್ಷರಿಲ್ಲ. ಹೀಗಾಗಿ ಆಡಳಿತರೂಢ ಕಾಂಗ್ರೆಸ್ ಸರ್ಕಾರವನ್ನು ಗಟ್ಟಿಯಾಗಿ ಎದುರಿಸಲು ಆಗುತ್ತಿಲ್ಲ.
ಇದೀಗ ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪ, ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಸಂಸದ ಪಿ.ಸಿ ಮೋಹನ್ ಅವರನ್ನು ದೆಹಲಿಗೆ ಕರೆಯಲಾಗಿದೆ. ಇಂದು ಮಧ್ಯಾಹ್ನ 3.30ಕ್ಕೆ ಪಕ್ಷದ ಕಚೇರಿಯಲ್ಲಿ ಭೇಟಿ ನಿಗದಿಯಾಗಿದೆ. ಕಳೆದ ವಾರ ಮಾಜಿ ಸಿಎಂ ಡಿ.ವಿ ಸದಾನಂದಗೌಡರನ್ನು ಕರೆಸಿಕೊಂಡ ಭೇಟಿಯಾಗದೆ ವಾಪಸ್ ಕಳಿಸಿದ್ದರು. ಹೀಗಾಗಿ ಅಪಮಾನದ ಮೇಲೆ ಅಪಮಾನ ರಾಜ್ಯ ಬಿಜೆಪಿ ನಾಯಕರಿಗೆ ಆಗುತ್ತಿದೆ.
ಇಂದು ಹೋಗುತ್ತಿರುವ ಈ ಮೂವರು ನಾಯಕರನ್ನಾದರೂ ಭೇಟಿಯಾಗಿ ಏನಾದರೂ ಸಲಹೆ, ಸೂಚನೆಗಳನ್ನು ನೀಡುತ್ತಾರ ನೋಡಬೇಕು. ಇಲ್ಲದೆ ಹೋದರೆ ಹೋದ ಪುಟ್ಟ ಬಂದ ಪುಟ್ಟ ಕಥೆಯಾಗಲಿದೆ.