ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ಹಲಿಗೆ ಬಾರಿಸುತ್ತಾ ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇನ್ನು ಮಂಗಳವಾರ ಹೋಳಿಹುಣ್ಣಿಮೆ ಇದ್ದು, ಬುಧವಾರ ಬಣ್ಣದಾಟ ನಡೆಯಲಿದೆ.
ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಆಟವಾಡುವ ಸಂದರ್ಭದಲ್ಲಿ ಅನೇಕರು ತಮ್ಮ ಸಾಕು ಪ್ರಾಣಿಗಳ ಜೊತೆಗೆ ಇತರೆ ಪ್ರಾಣಿಗಳಿಗೆ ಬಣ್ಣವನ್ನು ಹಚ್ಚುತ್ತಾರೆ. ಬೀದಿಯಲ್ಲಿರುವ ದನ ಕರುಗಳು, ನಾಯಿ ಸೇರಿ ಇತರೆ ಪ್ರಾಣಿಗಳಿಗೆ ಬಣ್ಣ ಎರಚಲಾಗುತ್ತೆ. ಇದು ಅವುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ನೋಟಿಸ್ ನೀಡಿದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ಸಕ್ಷನ್ 11ರ ಪ್ರಕಾರ ಪ್ರಾಣಿಗಳ ಮೇಲೆ ಮಾರಕ ಬಣ್ಣವನ್ನು ಹಚ್ಚುವುದು ಕ್ರೌರ್ಯವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಪ್ರಾಣಿ, ಪಕ್ಷಿಗಳಿಗೆ ಬಣ್ಣ ಎರಚದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ.