ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲು ಎಲ್ಲರನ್ನೂ ಹೈರಾಣು ಮಾಡಿದೆ. ಮನೆಯಲ್ಲಿದ್ದರೂ ಹೈರಾಣು, ಹೊರಗೆ ಹೋದರೆ ಇನ್ನೂ ಹೈರಾಣು. ಸೂರ್ಯನ ಕಡುತಾಪಕ್ಕೆ ಜನತೆ ವಿಲವಿಲ ಎನ್ನುತ್ತಿದ್ದಾರೆ. ಇದರಿಂದಾಗಿ ಕೆಲಸಗಳು ಸರಿಯಾಗಿ ಆಗದೆ ಅರ್ಧಕ್ಕೆ ಉಳಿಯುತ್ತಿವೆ.
ಕಲಬುರಗಿಯಲ್ಲಿ ಭಾನುವಾರ ಬರೋಬ್ಬರಿ 43.1 ಡಿಗ್ರಿ ಸೆಲಿಯಸ್ ಉಷ್ಣಾಂಶ ದಾಖಲಾಗಿದೆ. ರಾಯಚೂರು 41.8 ಡಿ.ಸೆ, ಬಾಗಲಕೋಟೆ 42.5 ಡಿ.ಸೆ, ಕೊಪ್ಪಳ 41.3 ಡಿ.ಸೆ, ವಿಜಯಪುರ 41 ಡಿ.ಸೆ ಉಷ್ಣಾಂಶ ದಾಖಲಾಗಿದ್ದು, ಜನರು ಇನ್ನಿಲ್ಲದಂತೆ ಪರದಾಡುತ್ತಿದ್ದಾರೆ. ಇನ್ನು ಸಿಲಿಕಾನ್ ಸಿಟಿಯಲ್ಲಿ 37.6 ಡಿಗ್ರಿ ಸೆಲಿಯಸ್ ಉಷ್ಣಾಂಶವಿದ್ದು, ಕಳೆದ 8 ವರ್ಷಗಳಲ್ಲಿಯೇ ಅಧಿಕ ಉಷ್ಣಾಂಶವಾಗಿದೆ.
ಇದರ ನಡುವೆ ಒಂದಿಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಮಂಗಳೂರು, ಚಿಕ್ಕಮಗಳೂರು, ಕೊಡಗು ಭಾಗಗಳಲ್ಲಿ 2 ದಿನಗಳ ಕಾಲ ಬಿಸಿ ಹಾಗೂ ತೇವ ವಾತಾವರಣ ಮುಂದುವರೆಯಲಿದೆ.
ಇದು ಸಾಲದು ಎಂಬಂತೆ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಕೊಪ್ಪಳ, ಯಾದಗಿರಿ, ರಾಯಚೂರು ಭಾಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.