ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕಳೆದ 16 ವರ್ಷಗಳಿಂದ ಆರ್ ಸಿಬಿ ತಂಡ ಐಪಿಎಲ್ ಕಪ್ ಎತ್ತಿ ಹಿಡಿದಿಲ್ಲ. ಆದರೆ, ಎರಡೇ ವರ್ಷದಲ್ಲಿ ಮಹಿಳಾ ತಂಡ ಇದನ್ನು ಸಾಧಿಸಿ ತೋರಿಸಿದೆ. ಹೀಗಾಗಿ ಈ ಬಾರಿ ಬಾಯ್ಸ್ ಟೀಂ ಸಹ ಕಪ್ ಗೆಲ್ಲುತ್ತೆ ಎಂದುಕೊಂಡಿರುವ ಫ್ಯಾನ್ಸ್ ಗೆ ಸೋಲಿನ ಮೇಲೆ ಸೋಲಿನ ಕಹಿ ಅನುಭವ ಆಗುತ್ತಿದೆ. ಆರ್ ಸಿಬಿ ಇದು ಹೊಸ ಅಧ್ಯಾಯ ಎಂದು ಸ್ಲೋಗನ್ ಹೇಳಿದರೂ ಹಳೆ ಚಾಳಿ ಮುಂದುವರೆದಿದೆ.
ಶನಿವಾರ ಸಂಜೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಸೋಲು ಅನುಭವಿಸಿದೆ. ಅತ್ತ ಆರ್ ಆರ್ ಟೀಂ ಆಡಿರುವ 4 ಪಂದ್ಯಗಳನ್ನು ಗೆದ್ದು ನಂಬರ್ ಒನ್ ಸ್ಥಾನದಲ್ಲಿದೆ. ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಲೆಕ್ಕಾಚಾರವನ್ನು ವಿರಾಟ್ ಕೊಹ್ಲಿ ಬದಲು ಮಾಡಿದರು. ಆದರೆ, ಉಳಿದವರು ಸಾಥ್ ನೀಡಿದ ಪರಿಣಾಮ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು.
ಕೊಹ್ಲಿ 4 ಸಿಕ್ಸ್, 12 ಫೋರ್ ನೊಂದಿಗೆ 113 ರನ್ ಗಳಿಸಿ ಅಜೇಯರಾಗಿ ಉಳಿದರು. ನಾಯಕ ಡುಪ್ಲಸಿಸ್ 44 ರನ್ ಬಿಟ್ಟರೆ ಎಲ್ಲರೂ ಮತ್ತೆ ಫೇಲ್ ಆದರು. ಮ್ಯಾಕ್ಸ್ ವೆಲ್ 1, ಸೌರವ್ ಚೌವ್ಹಾಣ್ 9, ಕ್ಯಾಮೆರನ್ ಗ್ರೀನ್ ಅಜೇಯ 5 ರನ್ ಗಳಿಸಿದರು. ಆರ್ ಆರ್ ಪರ ಚಹಲ್ 2, ಬರ್ಗರ್ 1 ವಿಕೆಟ್ ಪಡೆದರು.
184 ರನ್ ಗಳ ಗುರಿ ಬೆನ್ನು ಹತ್ತಿದ ರಾಜಸ್ಥಾನ್ ಪಡೆ, ಜೋಶ್ ಬಟ್ಲರ್ ಅಜೇಯ ಶತಕದಿಂದಾಗಿ 19.1 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಗೆಲುವಿನ ದಡ ಸೇರಿತು. ಬಟ್ಲರ್ 4 ಸಿಕ್ಸ್, 9 ಫೋರ್ ಗಳೊಂದಿಗೆ 58 ಬೌಲ್ ಗಳಲ್ಲಿ ಶತಕ ಗಳಿಸಿದರು. ನಾಯಕ ಸಂಜು ಸ್ಯಾಮ್ಸನ್ 69 ರನ್ ಬಾರಿಸಿದರು. ಜೈಸ್ವಾಲ್ 0, ಪರಾಗ್ 4, ಧ್ರುವ್ ಜುರ್ಲೆ 2, ಹಟ್ಮೈರ್ ಅಜೇಯ 11 ರನ್ ಗಳಿಸಿದರು. ಆರ್ ಸಿಬಿ ಪರ ರೀಶ್ ಟೊಪ್ಲಿ 2, ಯಶ್ ದಯಾಳ್, ಸಿರಾಜ್ ತಲಾ 1 ವಿಕೆಟ್ ಪಡೆದರು. ಜೋಶ್ ಬಟ್ಲರ್ ಮ್ಯಾನ್ ಆಫ್ ದಿ ಮ್ಯಾಚ್ ಆದರು.