ಸಿಂದಗಿ: ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಪುರಸಭೆಯಿಂದ ಹೈಡ್ರೋಕ್ಲೋರಿಕ್ ಸ್ಪ್ರೇ ಸಿಂಪಡಣೆ ಮಾಡೋ ಕಮಾನ್ ನಿರ್ಮಾಣ ಮಾಡಲಾಗಿದೆ. ಕಳೆದ ಏಪ್ರಿಲ್ 24ರಂದು ಶಾಸಕ ಎಂ.ಸಿ ಮನಗೂಳಿ ಅವರು, ಇದನ್ನ ಉದ್ಘಾಟನೆ ಮಾಡಿದ್ದಾರೆ. ಆದ್ರೆ, ಇದು ಸುಮಾರು ಒಂದು ವಾರ ಮಾತ್ರ ಕೆಲಸ ಮಾಡಿದೆ. ಅಲ್ಲಿಂದ ಸಂಪೂರ್ಣ ಬಂದ್ ಆಗಿದೆ.
ಜನತೆಯ ಸುರಕ್ಷೆತೆ ದೃಷ್ಟಿಯಿಂದ ಇದನ್ನ ನಿರ್ಮಾಣ ಮಾಡಲಾಗಿದೆ. ಆದ್ರೆ, ಅದು ಕಾರ್ಯನಿರ್ವಹಿಸ್ತಿದ್ಯಾ? ಯಾಕೆ ನಿಂತಿದೆ? ಏನಾಗಿದೆ ಅಂತಾ ಯಾರೊಬ್ಬರೂ ವಿಚಾರ ಮಾಡ್ತಿಲ್ಲ. ಪಟ್ಟಣದಲ್ಲಿ ಇದೀಗ ಸಂಚಾರ ಹೆಚ್ಚಾಗಿದೆ. ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಕೇಂದ್ರ ಬಸ್ ನಿಲ್ದಾಣ ರಸ್ತೆ ಸದಾ ಬ್ಯುಸಿ ಇರುತ್ತೆ. ಇದನ್ನ ಗಮನಿಸಿ ನಿರ್ಮಿಸಿರುವ ಹೈಡ್ರೋಕ್ಲೋರಿಕ್ ಸ್ಪ್ರೇ ಸಿಂಪಡಣೆ ಮಾಡುವುದನ್ನೇ ನಿಲ್ಲಿಸಲಾಗಿದೆ. ಈ ಬಗ್ಗೆ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ನಾಯಕ ಅವರನ್ನ ಕೇಳಿದ್ರೆ, ಲಾಕ್ ಡೌನ್ ಮುಗಿದಿದೆ. ನಾವೇ ಬಂದ್ ಮಾಡೀವಿ ಎಂದು ಹೇಳ್ತಿದ್ದಾರೆ. ಮೇ 31ರ ತನಕ ಲಾಕ್ ಡೌನ್ ಮುಂದುವರೆಸಲಾಗಿದೆ. 3ನೇ ಹಂತದ ಲಾಕ್ ಡೌನ್ ಇರುವಾಗ್ಲೇ ಸ್ಪ್ರೇ ಬಂದ್ ಆಗಿದೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ಲಾಕ್ ಡೌನ್ ಮುಗಿದಿದೆ. ಬಂದ್ ಮಾಡಿದ್ದೇವೆ ಅಂದ್ರೆ, ಸಾರ್ವಜನಿಕರು ಏನೆಂದು ತಿಳಿದುಕೊಳ್ಳಬೇಕು ಗೊತ್ತಾಗ್ತಿಲ್ಲ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗ್ತಿದೆ. ಮೇ 31ರ ತನಕ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. ಇದರ ನಡುವೆ ನಾಳೆಯಿಂದ ಜನರ ಓಡಾಟ ಇನ್ನೂ ಹೆಚ್ಚಾಗ್ತಿದ್ದು, ಹೈಡ್ರೋಕ್ಲೋರಿಕ್ ಸ್ಪ್ರೇ ಸಿಂಪಡಣೆ ಅಗತ್ಯವಿದೆ. ಪಟ್ಟಣದಲ್ಲಿ ನಿರ್ಮಿಸಿರುವುದೇ ಇದೊಂದು ಸ್ಪ್ರೇ ಕಮಾನ್. ಅದು ನಿಂತಿರುವುದು ನಿಜಕ್ಕೂ ದುರಂತವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.