ಪ್ರಜಾಸ್ತ್ರ ಬ್ರೇಕಿಂಗ್ ನ್ಯೂಸ್
ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದೆ. ಅಲ್ದೇ, ಆಕಳು ಹಾಗೂ ಕರುವೊಂದನ್ನ ಸಹ ತಿಂದು ಹೋಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ರಾಸುಗಳನ್ನ ಅರ್ಧಂಬರ್ಧ ತಿಂದು ಹೋಗಿದೆ. ಅದರ ಹೆಜ್ಜೆ ಗುರುತುಗಳು ಮಣ್ಣಿನಲ್ಲಿ ಮೂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ರಾತ್ರಿ ಗ್ರಾಮದ ಶಂಕರಗೌಡ ಸಿದ್ಧನಗೌಡ ಬಿರಾದಾರ ಎಂಬುವರ ಹೊಲದಲ್ಲಿನ ರಾಸುಗಳನ್ನ ತಿಂದು ಹೋಗಿದೆ. ಈ ವಿಷಯ ಬೆಳಗಿನ ಜಾವ ತಿಳಿದು ಬಂದಿದೆ. ಈ ಘಟನೆಯಿಂದಾಗಿ ಸಹಜವಾಗಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಹಿಂದೆ ಗೊರಗುಂಡಗಿ, ಗಬಸಾವಳಗಿ, ಕಕ್ಕಳಮೇಲಿ ಭಾಗದಲ್ಲಿ ಸಹ ಕಾಣಿಸಿಕೊಂಡಿದೆ. ಈ ಬಗ್ಗೆ ಹಲವು ಜನರಲ್ಲಿ ಚಿರತೆ ಹಾವಳಿ ಅನ್ನೋ ಅನುಮಾನ ಮೂಡಿದೆ. ಆದ್ರೆ, ತಾಲೂಕು ಆಡಳಿತಾಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಚಿರತೆ ಅಲ್ಲ. ಕತ್ತೆಕಿರುಬ(ಹೈನಾ) ಇದೆ ಎಂದು ಹೇಳ್ತಿದ್ದಾರೆ. ಅದೇನೇ ಇರ್ಲಿ ಮುಂದೆ ಅನಾಹುತ ಸಂಭವಿಸುವ ಮೊದ್ಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.