ಪ್ರಜಾಸ್ತ್ರ ಸುದ್ದಿ
ಸಿಂದಗಿ: ಮನೆಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿರುವುದಕ್ಕೆ ತಾಲೂಕಿನ ಹೊನ್ನಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಮೂಲಕ ಗ್ರಾಮಸ್ಥರು ಮತ್ತೊಮ್ಮೆ ಬೀದಿಗಿಳಿದು, ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಗ್ರಾಮದ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಸದಸ್ಯರು, ಗ್ರಾಮದ ಯುವಕರು, ಹಿರಿಯರು ಸೇರಿಕೊಂಡು ಅಕ್ರಮ ಮದ್ಯ ಮಾರಾಟದ ವಿರುದ್ಧ ಸತತವಾಗಿ ಹೋರಾಟ ಮಾಡಿಕೊಂಡು ಬರ್ತಿದ್ದಾರೆ. ಆದ್ರೆ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕಾಟಾಚಾರಕ್ಕೆ ಗ್ರಾಮಕ್ಕೆ ಭೇಟಿ ನೀಡಿ, ಯಾವುದೇ ಮದ್ಯ ಸಿಕ್ಕಿಲ್ಲವೆಂದು ವಾಪಸ್ ಹೋಗುತ್ತಾರೆ ಎಂದು ಗ್ರಾಮಸ್ಥರು ಹೇಳ್ತಿದ್ದಾರೆ.
ಅಕ್ರಮವಾಗಿ ಮಾರಾಟ ಮಾಡ್ತಿದ್ದ ಮದ್ಯದ ಪಾಕೇಟ್ ಬಾಟಲ್ ಗಳನ್ನ ರೋಡಿಗೆ ತಂದು ಸುರಿದ ಬೈಕ್ ಹಾಯಿಸಿ ನಾಶ ಪಡಿಸಲಾಗಿದೆ. ಕೆಲವೊಂದಿಷ್ಟಕ್ಕೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ಗ್ರಾಮಸ್ಥರಿಗೆ ಸಿಗುವ ಅಕ್ರಮ ಮದ್ಯ, ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಇದು ಬರೀ ಹೊನ್ನಳ್ಳಿ ಗ್ರಾಮವೊಂದರಲ್ಲಿ ಮಾತ್ರವಲ್ಲ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆದಿದ್ರೂ, ಅಧಿಕಾರಿಗಳು ಕಣ್ಮುಚ್ಚಿ ಕುಳ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಪ್ರತಿಭಟನೆ ವೇಳೆ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಸದಸ್ಯರು, ಮುದಕಮ್ಮ ಗೌಂಡಿ, ಮಾಬಣ್ಣಿ ಗಬಸಾವಳಗಿ, ಸರಸ್ವತಿ ಡಿಗ್ಗಿ, ಹುಸೇನ ತಂಗಡಗಿ, ರಂಜಾನಬಿ ಕತ್ನಳ್ಳಿ, ಮುಸ್ತಾಪ, ಮಹಾಂತೇಶ, ಆಸೀಫ, ಗುರುರಾಜ ಸೇರಿದಂತೆ ಅನೇಕರು ಭಾಗವಹಿಸಿದ್ರು.