ರಾಮನಗರ: ಕನಕಪುರ ತಾಲೂಕಿನ ಕಪಾಲ ಬೆಟ್ಟಕ್ಕೆ ಇಂದು ಬೆಳಗ್ಗೆ 11 ಗಂಟೆಗೆ ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ಇತ್ತೀಚೆಗೆ ಶಂಕು ಸ್ಥಾಪನೆ ಮಾಡಿದ್ರು. ಬಳಿಕ ಇದು ಭಾರೀ ವಿವಾದಕ್ಕೆ ಕಾರಣವಾಯ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯಿತು. ಅಲ್ದೇ ಸೋಷಿಯಲ್ ಮೀಡಿಯಾದಲ್ಲಿಯೂ ಪರ ವಿರೋಧದ ಚರ್ಚೆಗಳು ಭರ್ಜರಿಯಾಗಿಯೇ ನಡೆದವು. ಗೋಮಾಳ ಜಾಗವನ್ನ ಕಬಳಿಸಲಾಗಿದೆ ಅಂತಾ ಆರೋಪಿಸಲಾಯ್ತು. ಎಕರೆ 1 ಲಕ್ಷದಂತೆ 10 ಲಕ್ಷಕ್ಕೆ 10 ಎಕರೆ ಜಾಗ ಖರೀದಿಸಲಾಗಿದೆ ಅಂತಾನೂ ಹೇಳಲಾಯ್ತು.
ಸದ್ಯ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣದ ಕಾಮಗಾರಿ ಸ್ಥಗಿತಗೊಂಡಿದೆ. ಕೆಲಸಗಾರರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. ಇಡೀ ಪ್ರಕರಣ ವಿವಾದದಿಂದ ಕೂಡಿದ ಪರಿಣಾಮ ಬೆಟ್ಟದ ಸುತ್ತಮುತ್ತ ಪೊಲೀಸ್ ಬಂದೋಬಸ್ತಿ ನೀಡಲಾಗಿದೆ.