ರಾಮನಗರ: ಅಕ್ಟೋಬರ್ 9ರಂದು ಕನಕಪುರದಲ್ಲಿ ಏಳು ತಲೆಯ ಹಾವಿನ ಪೊರೆ ಕಂಡಿದ್ದ ಸುದ್ದಿ ಜಿಲ್ಲೆಯ ತುಂಬಾ ಭರ್ಜರಿ ಸುದ್ದಿ ಮಾಡಿತ್ತು. ಇಲ್ಲಿನ ಗ್ರಾಮಸ್ಥರು ಪೊರೆಗೆ ಪೂಜೆ ಸಹ ಮಾಡಿದ್ರು. ಕಾರಣ, 6 ತಿಂಗಳ ಹಿಂದೆ ಕಂಡ ಜಾಗದಲ್ಲಿಯೇ ಮತ್ತೆ ಏಳೆ ತಲೆ ಹಾವಿನ ಪೊರೆ ಕಾಣಿಸಿಕೊಂಡಿದ್ರಿಂದ, ಜನರು ಇದು ಪವಾಡ ಎಂದು ನಂಬಿದ್ರು.
ಏಳು ತಲೆ ಹಾವಿನ ಪೊರೆಯ ಹಿಂದೆ ಭರ್ಜರಿ ಸಂಚಿದೆ ಅಂತಾ ಉರಗ ತಜ್ಞ ಆರ್.ಸುರೇಶ ಹೇಳ್ತಿದ್ದಾರೆ. ಒಂದೇ ಹಾವಿನ ಪೊರೆಯನ್ನೇ ಏಳು ತಲೆಯನ್ನಾಗಿ ಮಾಡಲಾಗಿದೆಯಂತೆ. ಸರ್ಪದ ಪೊರೆ ಸಿಕ್ಕ ಜಮೀನಿನ ಪಕ್ಕದಲ್ಲಿಯೇ ಸರ್ಕಾರಿ ಜಮೀನು ಇದೆ. ಅಲ್ಲಿ ನೀರನ ಸೊಣೆ, ಕಾಡುಗಣಲೆ ಮರಗಳಿವೆ. ಇದನ್ನ ತೋರಿಸಿ ಇಲ್ಲಿ ದೇವಸ್ಥಾನ ನಿರ್ಮಿಸುವ ಹುನ್ನಾರವಿದೆ ಅಂತಾ ಆರ್.ಸುರೇಶ ಹೇಳ್ತಿದ್ದಾರೆ. ಮನುಷ್ಯರಲ್ಲಿ ಸಯಾಮಿಗಳು ಇರುವಂತೆ ಹಾವುಗಳಲ್ಲಿ ಎರಡು ತಲೆಯ ಹಾವುಗಳಿವೆ. ಏಳು ತಲೆ ಹಾವು ಅನ್ನೋದು ಪುರಾಣಗಳ ಕಥೆಗಳಲ್ಲಿ ಕೇಳಿದ್ದೇವೆ ಅಂತಾರೆ.
ಜಿಲ್ಲಾಡಳಿತ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಿ, ಈ ಜಾಗದ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಗ್ರಾಮಸ್ಥರು ಸಹ ಕೇಳಿಕೊಂಡಿದ್ದಾರೆ. ಅಲ್ದೇ, ಜನರನ್ನ ಮೂಢನಂಬಿಕೆಗೆ ತಳ್ಳುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಉರಗ ತಜ್ಞ ಆರ್.ಸುರೇಶ ಒತ್ತಾಯಿಸಿದ್ದಾರೆ.