ಸಿಂದಗಿ: ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳನ್ನ ಒದಗಿಸುವಲ್ಲಿ ಹಾಗೂ ಚರಂಡಿ ಸ್ವಚ್ಛಗೊಳಿಸದೆ ಇರೋದನ್ನ ಖಂಡಿಸಿ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದಾರೆ. 10ರಿಂದ 15 ಸಾವಿರ ಜನಸಂಖ್ಯೆಯಿರುವ ಗ್ರಾಮದಲ್ಲಿ 7ವಾರ್ಡ್ 21 ಮಂದಿ ಸದಸ್ಯರಿದ್ದೂ ಇಲ್ಲದಂತಾಗಿದೆ ಎಂದು ಕಿಡಿ ಕಾರಿದ್ದಾರೆ.
ಗ್ರಾಮದಲ್ಲಿನ ಚರಂಡಿಗಳು ದುರ್ನಾತದಿಂದ ಕೂಡಿವೆ. ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿದ್ರೂ ಬಳಸಲು ಯೋಗ್ಯವಿಲ್ಲದಂತ ಪರಿಸ್ಥಿತಿಯಲ್ಲಿವೆ. ಇದ್ರಿಂದಾಗಿ ಮಹಿಳೆಯರು ಬಯಲುಶೌಚಕ್ಕೆ ಹೋಗುವ ಸ್ಥಿತಿಯಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಸೇರಿದಂತೆ ಯಾರೊಬ್ಬರೂ ಕೆಲಸ ಮಾಡ್ತಿಲ್ಲವೆಂದು ಮನವಿ ಪತ್ರದಲ್ಲಿ ತಿಳಿಸಿರುವ ಗ್ರಾಮಸ್ಥರು, 14ನೇ ಹಣಕಾಸು ಆಯೋಗವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಯಾವುದೇ ರೀತಿಯ ಕ್ರಮಗಳನ್ನ ತೆಗೆದುಕೊಳ್ಳದೆ ಹೋದರೆ, ಗ್ರಾಮ ಪಂಚಾಯ್ತಿಗೆ ಬೀಗ ಜಡಿದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.