ಕೆ.ಆರ್.ಪೇಟೆ: ಕರೋನಾ ಲಾಕ್ ಡೌನ್ ದಿಂದಾಗಿ ಕೃಷಿ ಮಾರುಕಟ್ಟೆಗೆ ಸಾಕಷ್ಟು ತೊಡಕಾಗುತ್ತದೆ ಎಂದು, ರೈತಸಂಘದ ರಾಜ್ಯ ಮುಖಂಡ ಮಂದಗೆರೆ ಜಯರಾಂ ಕಳವಳ ವ್ಯಕ್ತಪಡಿಸಿದ್ದಾರೆ. ಪಟ್ಟಣದ ನೈಸರ್ಗಿಕ ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನಾವು ಸುಸ್ಥಿರ ಕೃಷಿಗೆ ಬೆನ್ನು ಹಾಕಿ, ಕೈಗಾರಿಕಾ ಮಾದರಿಯ ಕೃಷಿಗೆ ಹೊಂದಿಕೊಂಡಿದ್ದೇವೆ. ಕೃಷಿಗೆ ಬೇಕಾಗಿರುವ ಬೀಜ, ಗೊಬ್ಬರ ಹಾಗೂ ಕೃಷಿ ಉಪಕರಣಗಳಿಗೆ ರೈತರು ಪರಾವಲಂಬಿಗಳಾಗಿದ್ದಾರೆ. ಪೂರ್ವ ಮುಂಗಾರು ಆಗಿರುವುದರಿಂದ ಬೀಜ ಹಾಗೂ ಗೊಬ್ಬರ ತುರ್ತಾಗಿ ಬೇಕಾಗಿದೆ. ಆದರೆ ಕರೋನಾ ಲಾಕ್ ಡೌನ್ ನಿಮಿತ್ತ ಮುಂಗಾರಿನ ಬೆಳೆಗೆ ಅಗತ್ಯವಿರುವ ರಾಸಾಯನಿಕ ಗೊಬ್ಬರ ಹಾಗೂ ಬಿತ್ತನೆ ಬೀಜಗಳಿಗೆ ಅಭಾವ ಎದುರಾಗಿದೆ ಎಂದರು.
ತೈಲೋದ್ಯಮ ಸ್ಥಗಿತವಾಗಿರುವುದರಿಂದ ಯೂರಿಯಾ ಮತ್ತು ಮತ್ತಿತರ ಗೊಬ್ಬರಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾವಸ್ತು ನ್ಯಾಫ್ತಾ ದೊರಕುತ್ತಿಲ್ಲವಾದ್ದರಿಂದ, ರಾಸಾಯನಿಕ ಗೊಬ್ಬರದ ತಯಾರಿಕೆಯ ಮೇಲೆ ಪರಿಣಾಮ ಬೀರಿ ಅಭಾವ ಸೃಷ್ಠಿಯಾಗಿದೆ. ಹೀಗಾಗಿ ಈ ಸಮಸ್ಯೆಯಿಂದ ಹೊರಬರಲು ಈಗಾಗಲೇ ಸೋತಿರುವ ರೈತರಿಗೆ ಬಡ್ಡಿರಹಿತ ಸಾಲ ನೀಡಬೇಕಿದೆ. ಕೃಷಿ ಉಪಕರಣಗಳ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ಕ್ರಮವಹಿಸಬೇಕಿದೆ ಎಂದು ತಿಳಿಸಿದರು.
ಈ ವೇಳೆ ರೈತ ಮುಖಂಡ ಲಕ್ಷ್ಮಿಪುರ ಜಗಣ್ಣ, ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ, ಕಾರಿಗನಹಳ್ಳಿ ಪುಟ್ಟೇಗೌಡ ಹಾಜರಿದ್ರು.