ಸಿಂದಗಿ: ಕರೋನಾ ಲಾಕ್ ಡೌನ್ ಸ್ವಲ್ಪ ಸಡಿಲಿಕೆ ಮಾಡಲಾಗಿದೆ. ಈ ಮೂಲಕ ಜನಜೀವನ ಒಂದಿಷ್ಟು ಸಹಜಸ್ಥಿತಿಯತ್ತ ಮರಳಿದೆ. ಹೀಗಾಗಿ ವ್ಯಾಪಾರ ವಹಿವಾಟ ಸ್ವಲ್ಪ ಚೇತರಿಕೆ ಕಂಡಿದೆ. ಇದರ ನಡುವೆ ಪಟ್ಟಣದಲ್ಲಿ ವ್ಯಾಪಾರಸ್ಥರ ಅಂದಾ ದರ್ಬಾರ್ ಜೋರಾಗಿ ನಡೆದಿದೆ.
ಪಟ್ಟಣದಲ್ಲಿರುವ ಕಿರಾಣಿ ಅಂಗಡಿಗಳು, ಜನರಲ್ ಸ್ಟೋರ್ಸ್, ಎಲೆಕ್ಟ್ರಿಕಲ್ಸ್ ಸೇರಿದಂತೆ ಅಗತ್ಯವಸ್ತುಗಳ ಮಾರಾಟದಲ್ಲಿ ಹೆಚ್ಚಿನ ಬೆಲೆಗೆ ಮಾರಲಾಗ್ತಿದೆ. 5 ರೂಪಾಯಿ ಬಿಸ್ಕೆಟ್ ಗೆ 6 ರೂಪಾಯಿ, ಹಾಲಿನ ಪಾಕೇಟ್ ಮೇಲೆ ಸಹ 2, 3, 4 ರೂಪಾಯಿಂತೆ ಹೆಚ್ಚಿಗೆ ಪಡೆಯುತ್ತಿದ್ದಾರೆ. ಕೇಳಿದ್ರೆ ಫ್ರಿಡ್ಜ್ ನಲ್ಲಿಟ್ಟದ್ದಕ್ಕೆ ಎಕ್ಸ್ಟ್ರಾ ರೇಟು ಅಂತಾರೆ ಎಂದು ಹೇಳ್ತಾರಂತೆ. 7, 8 ರೂಪಾಯಿ ತಂಬಾಕು ಪ್ಯಾಕೆಟ್ ಗಳು 20, 30 ರೂಪಾಯಿಗೆ ಮಾರಾಟ ಮಾಡ್ತಿದ್ದಾರೆ. ಇನ್ನು ದಿನಸಿ ವಸ್ತುಗಳಲ್ಲಿ ಸಹ ಮೂಲ ಬೆಲೆಯನ್ನ ಬಿಟ್ಟು ಮನಸ್ಸಿಗೆ ಬಂದಂತೆ ಬೆಲೆಗೆ ಮಾರಾಟ ಮಾಡಲಾಗ್ತಿದೆ. ಒಂದೊಂದು ಅಂಗಡಿಯಲ್ಲಿ ಒಂದೊಂದು ಬೆಲೆಗೆ ಅಗತ್ಯ ವಸ್ತುಗಳನ್ನ ಮಾರಾಟ ಮಾಡ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕ್ತಿದ್ದಾರೆ.
ತಾಲೂಕು ಆಡಳಿತ ಕಚೇರಿಯ ಸುತ್ತಮುತ್ತ ಇರುವ ಹೋಟೆಲ್ ಗಳಲ್ಲಿ ಕದ್ದುಮುಚ್ಚಿ ಬಿಡಿ, ಸಿಗರೇಟ್, ಗುಟ್ಕಾ, ಮಾನಿಕ್ ಚಂದ್ ಸೇರಿದಂತೆ ಪಾನ್ ಮಸಾಲಾಗಳನ್ನ ಮಾರಾಟ ಮಾಡಲಾಗ್ತಿದೆ. ಇನ್ನು 7 ಗಂಟೆಯ ನಂತರ ವ್ಯಾಪಾರ ವಹಿವಾಟು ಬಂದ್ ಮಾಡಬೇಕು ಅಂತಾ ಹೇಳಿದ್ರೂ ಹಲವು ಕಡೆ ಇದನ್ನ ಕಟ್ಟುನಿಟ್ಟಾಗಿ ಪಾಲಿಸ್ತಿಲ್ಲ. ರಾತ್ರಿ 9 ಗಂಟೆಯ ತನಕ ಅಂಗಡಿಗಳು ತೆರದಿರುತ್ತವೆ. ಈ ಮೂಲಕ ಗ್ರಾಹಕರಿಂದ ಹಣ ಸೂಲಿಗೆ ಮಾಡಲಾಗ್ತಿದೆ. ಲಾಕ್ ಡೌನ್ ನಿಂದ ಕೆಲಸವಿಲ್ಲದೆ, ಇರೋ ಅಲ್ಪಸಲ್ಪ ಹಣದಲ್ಲಿ ಜೀವನ ಮಾಡ್ತಿರುವ ಜನಗಳಿಗೆ ವ್ಯಾಪಾರಿಗಳು ಮನಸ್ಸಿಗೆ ಬಂದಂತೆ ಬೆಲೆಗೆ ಮಾರಾಟ ಮಾಡಿ ಹಗಲು ದರೋಡೆ ಮಾಡ್ತಿದ್ದಾರೆ.
ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ. ವ್ಯಾಪಾರಸ್ಥರಿಗೆ ಸೂಕ್ತ ಎಚ್ಚರಿಕೆ ನೀಡುವ ಮೂಲಕ, ಲಾಕ್ ಡೌನ್ ನ್ನೇ ಬಂಡಾವಳ ಮಾಡಿಕೊಂಡು ಜನರಿಗೆ ಇನ್ನಷ್ಟು ಬರೆ ಎಳೆಯುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ದೆ, ಹೋದ್ರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಾರ್ಯವೈಖರಿಯ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಲಿದೆ.