ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಚಿವ ಸಂಪುಟ ರಚನೆ ಬಳಿಕ ಖಾತೆ ಕಿರಿಕಿರಿ ನಡೆದಿದೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದಿರುವ ಸಚಿವರಲ್ಲಿ ಕೆಲವರು ನೀಡಿರುವ ಖಾತೆ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈಗಾಗ್ಲೇ ಸಿಎಂ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರಂತೆ. ಗುರುವಾರ ಸ್ಪೀಕರ್ ವಿಶ್ವವೇಶ್ವರಯ್ಯ ಕಾಗೇರಿ ಅವರು ಬೆಂಗಳೂರಿಗೆ ಬರ್ತಿದ್ದು, ಅವರ ಭೇಟಿಗೆ ಸಮಯಾವಕಾಶ ಪಡೆದಿದ್ದಾರೆ. ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ ರಾಜಕೀಯದಿಂದಲೇ ದೂರ ಉಳಿಯುವ ನಿರ್ಧಾರ ಮಾಡಿದ್ದಾರಂತೆ. ಮುಂದೆ ನಡೆಯುವ ಉಪ ಚುನಾವಣೆಗೂ ಸಹ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರಂತೆ.
ಈಗಾಗ್ಲೇ ಹೊಸಪೇಟೆಯಲ್ಲಿನ ಅವರ ಕಚೇರಿಯನ್ನ ಸಹ ಬಿಡುವ ಕೆಲಸ ಮಾಡುತ್ತಿದ್ದ ಮಂಗಳವಾರ ಬೋರ್ಡ್ ಸೇರಿದಂತೆ ಇತರೆ ವಸ್ತುಗಳನ್ನು ತೆಗೆದು ಹಾಕಿರುವುದು ಕಂಡು ಬಂದಿದೆ. ಇದ್ರಿಂದಾಗಿ ನೂತನ ಸಿಎಂಗೆ ಮತ್ತಷ್ಟು ತಲೆನೋವು ಶುರುವಾಗಿದೆ.