ಪ್ರಜಾಸ್ತ್ರ ಸುದ್ದಿ
ಧಾರವಾಡ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್ ಅವರು, ಧಾರವಾಡದ ಮುಮ್ಮಿಗಟ್ಟಿಯಲ್ಲಿ ತಂಪು ಪಾನೀಯ ತಯಾರಿಕ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ 900 ಕೋಟಿ ಹೂಡಿಕೆ ಮಾಡಿ ಎನರ್ಜಿ ಡ್ರಿಂಕ್, ಅವುಗಳ ಕ್ಯಾನ್ ತಯಾರಿಸುವ ಮೆ.ಸಿಲೋನ್ ಬಿವರೇಜ್ ಕ್ಯಾನ್ ಪ್ರೈ.ಲಿ ಕಂಪನಿ ಸ್ಥಾಪನೆಗೆ ಜಾಗ ಫೈನಲ್ ಆಗಿದೆ.
ಎಫ್ಎಂಸಿಜಿ ಘಟಕದ ಅಡಿಯಲ್ಲಿ ಕಂಪನಿ ಸ್ಥಾಪನೆಗೆ ಸರ್ಕಾರದಿಂದಲೂ ಬಹುತೇಕ ಒಪ್ಪಿಗೆ ಸಿಕ್ಕಿದೆ. ಇತ್ತೀಚೆಗೆ ಮುತ್ತಯ್ಯ ಮುರುಳೀಧರನ್ ಧಾರವಾಡಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದಕ್ಕೆ ಇದೀಗ ಪರಿಸರವಾದಿಗಳ ವಿರೋಧ ವ್ಯಕ್ತವಾಗಿದೆ. ನಿತ್ಯ 20 ಲಕ್ಷ ಲೀಟರ್ ನೀರು ಪೂರೈಕೆಯ ಬೇಡಿಕೆಯನ್ನು ಕಂಪನಿ ಇಟ್ಟಿದೆ. ಜಿಲ್ಲೆಯಲ್ಲಿ ಜಲಮೂಲದ ಸಮಸ್ಯೆಗಳಿಗೆ ಇಷ್ಟೊಂದು ಪ್ರಮಾಣದ ನೀರನ್ನು 15 ಲಕ್ಷ ಜನರಿಗೆ ಒದಗಿಸಬಹುದು. ಹೀಗಿರುವಾಗ ಇಂತಹದೊಂದು ಕಂಪನಿ ಬೇಕಾ ಎಂದು ಹಿರಿಯ ನಟ, ಪರಿಸರವಾದಿ ಸುರೇಶ್ ಹೆಬ್ಳೀಕರ್ ವಿರೋಧಿಸಿದ್ದಾರೆ.
ಎನರ್ಜಿ ಡ್ರಿಂಕ್ ಅನ್ನೋ ರೀತಿಯ ತಂಪು ಪಾನೀಯಗಳಿಂದ ಆರೋಗ್ಯದ ಸಮಸ್ಯೆಯಾಗುತ್ತೆ. ಈಗಾಗ್ಲೇ ಯುವ ಜನತೆ ಇವುಗಳ ದಾಸರಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಿರುವಾಗಿ ಇಂತಹ ಉದ್ಯಮ ಬಿಟ್ಟು ಬೇರೆ ರೀತಿಯ ಉದ್ಯಮ ಬರಲಿ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
900 ಕೋಟಿ ಯೋಜನೆಯ ಕಂಪನಿಗೆ 36 ಎಕರೆ ಭೂಮಿಗೆ ಬೇಡಿಕೆ ಸಲ್ಲಿಸಿದೆ. ಸಧ್ಯ 15 ಎಕರೆ ಭೂಮಿ ನೀಡಲಾಗುತ್ತಿದೆ. ಮೂರು ಹಂತದಲ್ಲಿ ಈ ಉದ್ಯಮದ ಕೆಲಸ ನಡೆಯಲಿದೆ. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯಿಂದ ಬಹುತೇಕ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಪರಿಸರವಾದಿಗಳ ವಿರೋಧ ವ್ಯಕ್ತವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗುತ್ತೆ ಕಾದು ನೋಡಬೇಕು.