ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡ, ಬೆಳಗಾವಿ, ಕೊಪ್ಪಳ, ಮೈಸೂರು, ಕೊಡಗು ಸೇರಿ ಅನೇಕ ಕಡೆ ಲೋಕಾಯುಕ್ತ ದಾಳಿ ನಡೆದಿದೆ.
ಧಾರವಾಡದ ಸಪ್ತಾಪುರ ಭಾವಿ ಹತ್ತಿರ ಇರುವ ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್ ಆನಿಶೆಟ್ಟರ್ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಮೊದಲು ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಧಾರವಾಡದಲ್ಲೂ ಮನೆ ಇದೆ. ಅವರ ಸಹೋದರನ ಮನೆಯಲ್ಲೂ ಪರಿಶೀಲನೆ ನಡೆದಿದೆ.
ಕೊಡಗು ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಮನೆಯ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಪರಿಯಾಪಟ್ಟಣದ ಮಾಕನಹಳ್ಳಿಯಲ್ಲಿರುವ ಅವರ ಮಾವನ ಮನೆಯ ಮೇಲೂ ದಾಳಿ ನಡೆದಿದೆ. ಮಡಿಕೇರಿ ಮನೆಯಲ್ಲಿ ಹಣ ಪತ್ತೆಯಾಗಿದ್ದು, ಶೋಧನೆ ಮುಂದುವರೆದಿದೆ. ಮಡಿಕೇರಿಯಲ್ಲಿನ ಅಧಿಕಾರಿಯ ಮನೆಯಲ್ಲಿಯೂ ಪರಿಶೀಲನೆ ಕಾರ್ಯ ನಡೆದಿದೆ.
ಮೈಸೂರಿನಲ್ಲಿರುವ ಹಾರಂಗಿ ಆಣೆಕಟ್ಟೆಯ ಅಧೀಕ್ಷಕ ಇಂಜಿನಿಯರ್ ರಘುಪತಿ ಕೆ.ಕೆ ಅವರ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಕೊಪ್ಪಳ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮಂಜುನಾಥ್ ಬನ್ನಿಕೊಪ್ಪ ಅವರ ಮನೆ, ಕಚೇರಿ ಮೇಲೂ ದಾಳಿ ನಡೆಸಲಾಗಿದೆ.