ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳಿಗೆ ಸಂಬಂಧಿಸಿದ 60 ಸ್ಥಗಳಲ್ಲಿ ದಾಳಿ ನಡೆದಿದೆ. ಬೆಂಗಳೂರು, ಬಿಡದಿ, ರಾಮನಗರ, ಮೈಸೂರು, ಉತ್ತರ ಕನ್ನಡ, ಧಾರವಾಡ, ವಿಜಯಪುರ, ಬೆಳಗಾವಿ, ಚಿಕ್ಕಬಳ್ಳಾಪುರ, ಬೀದರ್, ಕೋಲಾರ, ಮಡಿಕೇರಿ, ಕಾರವಾರ ಸೇರಿ 13 ಅಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ.
ಬಿಬಿಎಂಪಿ ಯಲಹಂಕ ವಲಯದ ಎಂಜನಿಯರ್ ರಂಗನಾಥ್ ಎಸ್.ಪಿ, ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಯತೀಶ್, ಚನ್ನಪಟ್ಟಣ ಮೈಲನಾಯಕನಹಳ್ಳಿಯ ಪಿಡಿಒ ಶಿಭಾ ನಿಖಾತ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಓರ್ವ ಪಿಡಿಓ ಆಗಿರುವ ಯತೀಶ್ ಬರೋಬ್ಬರಿ 20 ಕೋಟಿ ಅಧಿಕಾ ಆಸ್ತಿ ಹೊಂದಿದ್ದಾನೆ ಎಂದು ಹೇಳಲಾಗುತ್ತಿದೆ. ಯತೀಶನನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರ ಕನ್ನಡದ ಹಿರಿಯ ಇಂಜನಿಯರ್ ಪ್ರಕಾಶ್, ಮೈಸೂರಿನ ಸಹಾಯಕ ಇಂಜನಿಯರ್ ಫಯಾಜ್ ಅಹಮ್ಮದ್, ಧಾರವಾಡ ವಲಯ ಅರಣ್ಯಾಧಿಕಾರಿ ಮಹೇಶ್ ಚಂದ್ರಯ್ಯ ಹಿರೇಮಠ, ಬಾಗಲಕೋಟೆ ಜಿಲ್ಲೆ ಜಮಖಂಡಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ, ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಜ್ಯೂನಿಯರ್ ಎಕ್ಸಿಕ್ಯೂಟಿವ್ ಇಂಜನಿಯರ್ ಪ್ರಕಾಶ್ ರೇವಣಕರ್, ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಇಒ ಜಯಣ್ಣ, ಚಿಕ್ಕಬಳ್ಳಾಪುರ ಕೆಆರ್ ಐಡಿಎಲ್ ಇಂಜನಿಯರ್ ಸದಾಶಿವಯ್ಯ, ಬೀದರನ ಕಾರಂಜಾ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರ್ ಶಿವಕುಮಾರಸ್ವಾಮಿ, ಕೋಲಾರದ ಸಹಾಯಕ ನಿರ್ದೇಶಕ ನಾಗರಾಜಪ್ಪ, ಬೆಳಗಾವಿಯ ನಿಡಗುಂದಿ ಗ್ರಾಮ ಪಂಚಾಯ್ತಿ ಕಾಯದರ್ಶಿ ಸದಾಶಿವ ಜಯ್ಯಪ್ಪ, ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮ ಪಂಚಾಯ್ತಿ ದ್ವಿತೀಯದರ್ಜೆ ಸಹಾಯಕ ಕೃಷ್ಣೇಗೌಡ ಹೀಗೆ ಹಲವು ಅಧಿಕಾರಿಗಳು ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ್ದು, ಇವರಿಗೆ ಸಂಬಂಧಿಸಿದ ಮನೆ, ಕಚೇರಿ, ಸಂಬಂಧಿಕರ ಮನೆಗಳ ಮೇಲೆಯೂ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆದಿದೆ.