ಚಿಕ್ಕಮಗಳೂರು: ಕಳೆದ ವರ್ಷ ಸುರಿದ ಭಾರೀ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಕಳಸ ಗ್ರಾಮ ಪಂಚಾಯ್ತಿ ವಾಪ್ತಿಯ ಕುಟುಂಬವೊಂದು ಮನೆ ಕಳೆದುಕೊಂಡಿದೆ. ಹೀಗಾಗಿ ಸುಮಾರು ಒಂದು ವರ್ಷದಿಂದ ಗುಹೆಯಲ್ಲಿ ವಾಸ ಮಾಡ್ತಿದ್ರೂ ಜಿಲ್ಲಾಡಳಿತ ಇವರಿಗೆ ಸೂರು ಕಲ್ಪಿಸಿಕೊಡುವ ಕೆಲಸ ಮಾಡಿಲ್ಲ.
ಮಾವಿನಕೆರೆ ಹತ್ತಿರದ ಕಲ್ಲಕ್ಕಿ ಅನ್ನೋ ಬಲಿಗೆ ಅರಣ್ಯದ ಗುಹೆಯಲ್ಲಿ ಅನಂತ ಎಂಬುವರ ಕುಟುಂಬ ವಾಸ ಮಾಡ್ತಿದೆ. ಕಳೆದ ವರ್ಷದ ಸುರಿದ ಭರ್ಜರಿ ಮಳೆಯಿಂದಾಗಿ ಗುಡ್ಡ ಕುಸಿದು ಕಲ್ಲಕ್ಕಿ ಗ್ರಾಮದಲ್ಲಿನ ಮನೆ, ತೋಟ ಎಲ್ಲವೂ ಕೊಚ್ಚಿಕೊಂಡು ಹೋಯ್ತು. ಅಂದನಿಂದ ಅನಂತ, ಹೆಂಡ್ತಿ, ಎರಡು ಮಕ್ಕಳನ್ನ ಕರೆದುಕೊಂಡು ಕಾಡಲ್ಲಿ ಜೀವನ ಮಾಡ್ತಿದ್ದಾರೆ. ಇದನ್ನ ನೋಡಿದ್ರೆ ಅವರ ಪರಿಸ್ಥಿತಿ ಎಷ್ಟೊಂದು ಕಷ್ಟವಿರಬೇಕು ಅನ್ನೋದು ಅರ್ಥವಾಗುತ್ತೆ. ಆದ್ರೆ, ಅಧಿಕಾರಿಗಳು ಅದ್ಯಾಕೆ ಇಂಥವರ ಜೀವನದ ಬಗ್ಗೆ ಗಮನರಿಸಲ್ವೋ ಗೊತ್ತಿಲ್ಲ.
ಸರ್ಕಾರವೇನು ಸೂರು ಕಳೆದುಕೊಂಡವರನ್ನ ಗುರುತಿಸಿ ಪರಿಹಾರ ಸೂರು ಕಲ್ಪಿಸಿ ಎಂದಿದೆ. ಆದ್ರೆ, ಜಿಲ್ಲಾಡಳಿತ ಇವರನ್ನ ಗುರುತಿಸುವಲ್ಲಿ ಕಣ್ಮುಚ್ಚಿ ಕುಳಿತಿತ್ತು, ಇದೀಗ ಎಚ್ಚೆತ್ತುಕೊಂಡು ತಹಶೀಲ್ದಾರ್ ಮೂಲಕ ಸ್ಥಳಕ್ಕೆ ಪರಿಶೀಲನೆಗೆ ಕಳುಹಿಸಲಾಗಿದೆ. ಇನ್ನು ಆ ಎರಡು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನ ಬೆಂಗಳೂರಿನ ಸಮರ್ಪಣಾ ಚಾರಿಟಬಲ್ ಟ್ರಸ್ಟ್ ವಹಿಸಿಕೊಂಡಿದೆ. ಆದ್ರೆ, ವರ್ಷಗಳೇ ಉರುಳಿ ಹೋದ್ರೂ ಈ ಕುಟುಂಬದ ಸ್ಥಿತಿ ಗಮನಕ್ಕೆ ಬಾರದೆ ಹೋಗಿದ್ದು ಮಾತ್ರ ದುರಂತ.