ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 16 ಕರೋನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ 443 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ದೃಢವಾಗಿದೆ. ಇವತ್ತಿನ 16 ಮಂದಿಯಲ್ಲಿ 9 ಮಂದಿ ಬೆಂಗಳೂರು ಗ್ರಾಮಾಂತರದವರಾಗಿದ್ದಾರೆ. ಈ 9 ಜನಕ್ಕೆ ಸೋಂಕು ತಗುಲಿರುವುದು ಒಬ್ಬನಿಂದ.
ಬಿಹಾರ ಮೂಲದ 54 ವರ್ಷದ ವ್ಯಕ್ತಿಯಲ್ಲಿ ನಿನ್ನೆ ಕರೋನಾ ಸೋಂಕು ದೃಢಪಟ್ಟಿತ್ತು. ಈ 419 ಪೆಸೆಂಟ್ ನಿಂದ 9 ಮಂದಿಗೆ ಸೋಂಕು ತಗುಲಿದ್ದು ಇವತ್ತಿನ ವರದಿಯಲ್ಲಿ ದಾಖಲಾಗಿದೆ. ಹೀಗಾಗಿ ಈತ ವಾಸವಾಗಿರುವ ಹೊಂಗಸಂದ್ರದಲ್ಲಿ ಆತಂಕ ಮೂಡಿದೆ. ಯಾಕಂದ್ರೆ, ಇಲ್ಲಿ 150ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ.
ಈ ವ್ಯಕ್ತಿ ಜ್ವರ ಹಾಗೂ ಉಸಿರಾಟದ ತೊಂದ್ರೆಯಿಂದ ಹೊಂಗಸಂದ್ರದಲ್ಲಿನ 4 ಆಸ್ಪತ್ರೆ, ಕಿಮ್ಸ್ ಹಾಗೂ ಜಯದೇವ ಆಸ್ಪತ್ರೆಗೆ ಸಹ ಹೋಗಿದ್ದಾನೆ. ಬಳಿಕ ರಾಜೀವ ಗಾಂಧಿ ಆಸ್ಪತ್ರೆಗೆ ಹೋದಾಗ ಈತನಿಗೆ ಕರೋನಾ ಸೋಂಕು ದೃಢಪಟ್ಟಿತ್ತು. ಇದೀಗ ಈತನಿಂದ 9 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಹೊಂಗಸಂದ್ರ ಸ್ಲಂದಲ್ಲಿ ಆತಂಕ ಮೂಡಿದೆ.
ಇನ್ನು ಬಿಬಿಎಂಪಿ ಈತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದವರನ್ನ ಗುರುತಿಸಿದೆ. ಸುಮಾರು 120 ಮಂದಿಯನ್ನ ಸಿ.ವಿ ರಾಮನ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಹಲವರನ್ನ ಪತ್ತೆ ಹಚ್ಚಲಾಗ್ತಿದೆ. ಇಲ್ಲಿರುವ ಮನೆಗಳಿಗೆ ಬೀಗ ಹಾಕುವ ಮೂಲಕ ಕಂಪ್ಲೀಟ್ ಸೀಲ್ ಡೌನ್ ಮಾಡಲಾಗಿದೆ.