ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಆಕ್ರಮಿತ ಪ್ರದೇಶವನ್ನ ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲಾಗುವುದು ಅನ್ನೋ ವಿವಾದಾತ್ಮಕ ಹಾಗೂ ಉದ್ಧಟತನದ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಲವು ಕಡೆ ಪ್ರತಿಭಟನೆಗಳು ಸಹ ನಡೆದಿವೆ.
ಇನ್ನು ಸಿಎಂ ಬಿ.ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಚಿವರು, ಕನ್ನಡಪರ ಸಂಘಟನೆಗಳು ಸೇರಿದಂತೆ ಪ್ರತಿಯೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. ಟ್ವೀಟರ್ ಮೂಲಕ ರಾಜಕೀಯ ನಾಯಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಆಕ್ರೋಶದ ಕಿಚ್ಚಿನಲ್ಲಿ, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಕ್ಷಿಪ್ರ ಕಾರ್ಯಪಡೆಯ ತರಬೇತಿ ಕೇಂದ್ರದ ಶಂಕು ಸ್ಥಾಪನೆ ಸಂದರ್ಭದಲ್ಲಿನ ಘಟನೆ ಮರೆತು ಹೋಗಬಾರದು ಎಂದು ಕನ್ನಡಿಗರು ಹೇಳುತ್ತಿದ್ದಾರೆ. ಕನ್ನಡ ನೆಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡವೇ ಇಲ್ಲ. ಇದರ ಜೊತೆಗೆ ತ್ರಿಭಾಷಾ ಸೂತ್ರ ಸಹ ಉಲ್ಲಂಘಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕು ಅಂತಿದ್ದಾರೆ.
ಉದ್ಧವ್ ಠಾಕ್ರೆ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪನವರು ಟ್ವೀಟರ್ ಮೂಲಕ ತಿರುಗೇಟು ನೀಡಿದಂತೆ, ಭದ್ರಾವತಿಯ ಕಾರ್ಯಕ್ರಮದಲ್ಲಿ ಕನ್ನಡಕ್ಕೆ ಮಾಡಿದ ಅಪಮಾನಕ್ಕೆ ಕ್ಷಮೆ ಕೇಳಬೇಕು. ಶಿಲನ್ಯಾಸದಲ್ಲಿ ಕನ್ನಡದ ಬೋರ್ಡ್ ಹಾಕಬೇಕು ಅನ್ನೋ ಆಗ್ರಹವನ್ನ ಕನ್ನಡಿಗರು ಮಾಡ್ತಿದ್ದಾರೆ. ಹೀಗಾಗಿ ಸಿಎಂ ಬಿಎಸ್ವೈ ಇದಕ್ಕೆ ಉತ್ತರಿಸಬೇಕಿದೆ.