ಪ್ರಜಾಸ್ತ್ರ ಸುದ್ದಿ
ಸಿಂದಗಿ: ಡೆಡ್ಲಿ ಕರೋನಾ ಎಷ್ಟೊಂದು ಅಪಾಯಕಾರಿ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಕರೋನಾ ವೈರಾಣು ಸೋಂಕು ದಿನ ಕಳೆದಂತೆ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಟೈಸರ್ ಬಳಕೆ ಮಾಡಬೇಕು ಎಂದು ಸರ್ಕಾರ ಹೇಳುತ್ತಲೇ ಇದೆ.
ಸರ್ಕಾರದ ನಿಯಮಗಳನ್ನ ಅದನ್ನ ಜಾರಿಗೆ ತರುವ ಜನಪ್ರತಿನಿಧಿಗಳೇ ಪಾಲಿಸಲ್ಲ ಎಂದು ಹೇಳಲಾಗುತ್ತೆ. ಅನೇಕ ವಿಚಾರಗಳಲ್ಲಿ ಅದು ನಿಜವಾಗಿದೆ. ಕರೋನಾ ಟೈಂನಲ್ಲಿಯೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನ ಸರಿಯಾಗಿ ಪಾಲನೆ ಮಾಡ್ತಿಲ್ಲ. ಇಂದು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣಕ್ಕೆ ಸಮಗ್ರ ಒಳಚರಂಡಿ ಯೋಜನೆಯ ಶಂಕು ಸ್ಥಾಪನೆಯನ್ನ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಎಂ.ಸಿ ಮನಗೂಳಿ ಸೇರಿ ಅನೇಕರು ನೆರವೇರಿಸಿದ್ರು.
ಹೀಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಆದಿಯಾಗಿ ಎಲ್ಲರೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನ ಪಾಲಿಸುವಲ್ಲಿ ಯಡವಿದ್ದಾರೆ. ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನ ಪಾಲನೆ ಮಾಡಿ, ಕರೋನಾ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಹೇಳುವ ಸಚಿವರೆ ಹೀಗೆ ನಡೆದುಕೊಂಡ್ರೆ ಹೇಗೆ ಎಂದು ಸಾರ್ವಜನಿಕರು ಕೇಳ್ತಿದ್ದಾರೆ. ಮಾಸ್ಕ್ ಹಾಕಿದವರು ಕಾಟಾಚಾರಕ್ಕೆ ಹಾಕಿದಂತೆ ಅರ್ಧಂಬರ್ಧ ಹಾಕಿದ್ದಾರೆ. ಸಾಮಾಜಿಕ ಅಂತರವಂತೂ ಮಾಯವಾಗಿ ಹೋಗಿದೆ.
ಸಚಿವರು, ಶಾಸಕರು ನಿತ್ಯ ಒಂದಲ್ಲ ಒಂದು ಊರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ಕಾರ್ಯಕ್ರಮ ಉದ್ಘಾಟನೆ, ಚಾಲನೆ ನೀಡ್ತಾರೆ. ಹೀಗಾಗಿ ಸದಾ ಪ್ರಯಾಣದಲ್ಲಿರುವ ಸಚಿವರು, ಶಾಸಕರು ಸಾಮಾಜಿಕ ಅಂತರ ಪಾಲನೆ ಮಾಡದೆ ಹೋದ್ರೆ, ಕರೋನಾ ಸೋಂಕು ಹೇಗೆ? ಯಾವಾಗ? ಎಲ್ಲಿ? ಯಾರಿಂದ ತಗುಲಿದೆ ಎಂದು ಹೇಳುವುದು. ರಾಜಕಾರಣಿಗಳ ಸಭೆ, ಸಮಾರಂಭಗಳಿಗೆ ಆರೋಗ್ಯ ಇಲಾಖೆಯ ಮಾರ್ಗಸೂಚಿ ಅನ್ವಿಯಿಸುವುದಿಲ್ವಾ? ಜನ ಸಾಮಾನ್ಯರ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಅನ್ವಿಯುಸುತ್ತಾ ಎಂದು ಜನರು ಪ್ರಶ್ನೆ ಮಾಡ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರಿಸಬೇಕಿದೆ.