ಪ್ರಜಾಸ್ತ್ರ ಸುದ್ದಿ
ನವದೆಹಲಿ: ಸಂಸತ್ ಮುಂಗಾರು ಅಧಿವೇಶನ ಜುಲೈ 18ರಿಂದ ಆಗಸ್ಟ್ 12ರ ತನಕ ನಡೆಯಲಿದೆ. ಈ ಸಂಬಂಧ ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ಆದರೆ, ಈ ಸಭೆಗೆ ಪ್ರಧಾನಿ ಮೋದಿಯೇ ಗೈರಾಗಿದ್ದಾರೆ. ಇದಕ್ಕೆ ವಿಪಕ್ಷಗಳು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ಸರ್ವಪಕ್ಷ ಸಭೆಗೆ ಪ್ರಧಾನಿ ಎಂದಿನಂತೆ ಗೈರಾಗಿದ್ದಾರೆ. ಇದು ಅಸಂಸದೀಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಧಿವೇಶನಕ್ಕೂ ಮೊದಲು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸುವುದು ವಾಡಿಕೆ. ಇದಕ್ಕೆ ಪ್ರಧಾನಿ ಗೈರಾಗಿರುವುದು ತೀವ್ರ ಆಕ್ರೋಶ ಕಾರಣವಾಗಿದೆ.
ಸಚಿವ ರಾಜನಾಥ್ ಸಿಂಗ್, ರಾಜ್ಯಸಭೆಯ ಬಿಜೆಪಿಯ ನಾಯಕ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸೇರಿ ಹಲವು ಸಚಿವರು ಸರ್ಕಾರವನ್ನು ಪ್ರತಿನಿಧಿಸಿದ್ದರು. ಕಾಂಗ್ರೆಸ್ ನ ಮಲ್ಲಿಕಾರ್ಜುನ್ ಖರ್ಗೆ, ಜೈರಾಮ್ ರಮೇಶ್, ಅಧೀರ್ ರಂಜನ್ ಚೌಧರಿ, ಡಿಎಂಕೆಯ ಟಿ.ಆರ್ ಬಾಲು, ತಿರುಚಿ ಶಿವ, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಎನ್ ಸಿಪಿಯ ಶರದ್ ಪವಾರ್, ವೈಎಸ್ ಆರ್ ಸಿಪಿಯ ವಿಜಯಸಾಯಿ ರೆಡ್ಡಿ, ಮಿಥುನ್ ರೆಡ್ಡಿ, ಬಿಜೆಡಿಯ ಪಿನಾಕಿ ಮಿಶ್ರಾ, ಶಿವಸೇನೆಯ ಸಂಜಯ್ ರಾವತ್, ಆರ್ ಜೆಡಿಯ ಎ.ಡಿ ಸಿಂಗ್, ಟಿಆರ್ ಎಸ್ ನ ಕೇಶವ್ ರಾವ್ ಸೇರಿದಂತೆ ಹಲವು ಪಕ್ಷಗಳ ಪ್ರಮುಖರು ಭಾಗವಹಿಸಿದ್ದರು.