ನವದೆಹಲಿ: 2002ರಲ್ಲಿ ನಡೆದ ಗೋದ್ರಾ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತೆ ಬಿಲ್ಕಿಸ್ ಬಾನೂಗೆ ಎರಡು ವಾರಗಳಲ್ಲಿ, 50 ಲಕ್ಷ ರೂಪಾಯಿ, ಸರ್ಕಾರಿ ನೌಕರಿ ಹಾಗೂ ಮನೆ ನೀಡುವಂತೆ ಸುಪ್ರೀಂ ಕೋರ್ಟ್ ಗುಜರಾತ ಸರ್ಕಾರಕ್ಕೆ ಆದೇಶಿಸಿದೆ.
ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಹೊರತಾಗಿಯೂ ಆಕೆಗೆ ನೀವು ಯಾಕೆ ಪರಿಹಾರ ನೀಡಿಲ್ಲವೆಂದ ಮುಖ್ಯ ನ್ಯಾಯಮೂರ್ತಿ ರಂಜನ ಗೊಗಾಯ್ ನೇತೃತ್ವದ ಪೀಠ ಗುಜರಾತ ಸರ್ಕಾರವನ್ನ ಪ್ರಶ್ನಿಸಿತು. ಎರಡು ವಾರಗಳಲ್ಲಿ ಆಕೆಗೆ ಪರಿಹಾರ, ನೌಕರಿ ಹಾಗೂ ಮನೆ ನೀಡಬೇಕೆಂದು ಆದೇಶಿಸಿದೆ.
ಘಟನೆ ಹಿನ್ನೆಲೆ:
ಮಾರ್ಚ್ 3, 2002ರಲ್ಲಿ ಬಿಲ್ಕಿಸ್ ಬಾನೂ ಕುಟುಂಬದ ಮೇಲೆ ಗುಂಪೊಂದು ದಾಳಿ ಮಾಡಿತ್ತು. ಈ ವೇಳೆ ಕುಟುಂಬದ 14 ಜನ ಸದಸ್ಯರನ್ನ ಹತ್ಯೆ ಮಾಡಲಾಗಿತ್ತು. ಮೂರು ವರ್ಷದ ಪುತ್ರಿ ಸಲೇಹಳನ್ನ ಕೂಡ ಬಿಟ್ಟಿರ್ಲಿಲ್ಲ. ಆಗ ಐದು ತಿಂಗಳ ಗರ್ಭಿಣಿಯಿದ್ದ ಬಾನೂ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ಳು. ಆಕೆಯೂ ಸತ್ತಿದ್ದಾಳೆಯಂದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ರು. ಅಂದಿನಿಂದ ಬಾನೂ ಅಲೆಮಾರಿಯಾಗಿ ಅಲೆಯುತ್ತಿದ್ದಾರೆ.
ಬಾನೂ ಮೇಲೆ ಅತ್ಯಾಚಾರವೆಸಗಿದ 11 ಜನರನ್ನ 2008ರಲ್ಲಿ ಬಾಂಬೆ ಹೈಕೋರ್ಟ್ ತಪ್ಪಿತಸ್ಥರೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತು. ಅಲ್ದೇ, ಈ ಪ್ರಕರಣದಲ್ಲಿ ಕೆಲ ಅಧಿಕಾರಿಗಳು ತಪ್ಪು ಎಸಗಿರುವುದು ಸಾಬೀತಾಗಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಹ ಹೇಳಲಾಗಿತ್ತು.