ಬೆಂಗಳೂರು: ಕರೋನಾ ಲಾಕ್ ಡೌನ್ ಆದ್ಮೇಲೆ ಪ್ರಧಾನಿ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಆಗಾಗ ವಿಡಿಯೋ ಸಂವಾದ ಮಾಡ್ತಿದ್ದಾರೆ. ಅದೇ ರೀತಿ ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ಸಂವಾದ ನಡೆಸಲಿದ್ದು, ಇದು 5ನೇ ವಿಡಿಯೋ ಸಂವಾದವಾಗಿದೆ. ಕೊನೆಯದಾಗಿ ಏಪ್ರಿಲ್ 27ರಂದು ನಡೆಸಿದ್ರು.
ಇಂದು ನಡೆಯುವ ಸಂವಾದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೆಲ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ರಾಜ್ಯಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಈಗಾಗ್ಲೇ ಘೋಷಿಸಿರುವ 1,610 ಕೋಟಿ ಕೆಲ ವರ್ಗಗಳಿಗೆ ಮಾತ್ರ ಸಿಕ್ಕಿದೆ. ಉಳಿದ ಶ್ರಮಿಕ ವರ್ಗಕ್ಕೆ ಸಿಗಬೇಕು ಅಂದ್ರೆ ಮತ್ತಷ್ಟು ವಿಶೇಷ ಆರ್ಥಿಕ ಪ್ಯಾಕೇಜ್ ಬೇಕು. ಇದನ್ನ ಚರ್ಚಿಸಲಿದ್ದಾರೆ.
ಇನ್ನು ವಲಸೆ ಕಾರ್ಮಿಕರನ್ನ ರಾಜ್ಯಕ್ಕೆ ವಾಪಸ್ ಕರೆಸಿಕೊಳ್ಳುವುದು, ಇಲ್ಲಿದ್ದವರನ್ನ ಅವರ ರಾಜ್ಯಗಳಿಗೆ ಕಳಿಸುವುದು ಸಹ ಸವಾಲಾಗಿದೆ. ಈ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ಮಾತ್ನಾಡಲಿದ್ದಾರೆ. ಆರ್ಥಿಕ ಚಟುವಟಿಕೆ ಶುರುವಾಗಿದ್ರೂ, ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರುತ್ತಿಲ್ಲ. ಹೀಗಾಗಿ ಈ ವಿಷ್ಯ ಪ್ರಸ್ತಾಪ ಮಾಡಲಿದ್ದಾರೆ.
ಅದೆ ರೀತಿ ವಿಪಕ್ಷಗಳು ರಾಜ್ಯದ ಜನತೆಗೆ ಏನು ಬೇಕು ಅನ್ನೋದರ ಪಟ್ಟಿ ಕೊಟ್ಟಿದೆ. ಈಗಿರುವ ಸ್ಥಿತಿಯಲ್ಲಿ ಅದು ಕಷ್ಟ. ಹೀಗಾಗಿ ಹಣಕಾಸಿನ ನೆರವು ನೀಡುವ ಕುರಿತು ಮಾತ್ನಾಡಲಿದ್ದಾರೆ. ಇನ್ನು ಲಾಕ್ ಡೌನ್ ಸಡಿಲಿಕೆ, ಮದ್ಯ ಮಾರಾಟಕ್ಕೆ ಪುನಃ ಅವಕಾಶ ನೀಡಿರುವುದು, ಕರೋನಾ ಸೋಂಕು ಹೆಚ್ಚಾಗ್ತಿರುವುದು, ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ಹೀಗೆ ಈ ಎಲ್ಲ ಪ್ರಮುಖ ವಿಚಾರಗಳ ಕುರಿತು ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರಸ್ತಾಪಿಸಲಿದ್ದಾರೆ ಎಂದು ಹೇಳಲಾಗ್ತಿದೆ.