ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನೆರೆಯ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ಪಲಸವಾಡೆ ಗ್ರಾಮದಲ್ಲಿ ಕರ್ತವ್ಯದ ಮೇಲಿದ್ದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಕೆಯ ಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಲಾಗಿದೆ. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಗ್ರಾಮದ ಮಾಜಿ ಸರಪಂಚ್ ಹಾಗೂ ಅರಣ್ಯ ಸಮಿತಿಯ ರಾಮಚಂದ್ರ ಜಂಕರ್ ಗರ್ಭಿಣಿ ಮಹಿಳಾಧಿಕಾರಿಯ ಮೇಲೆ ದರ್ಪ ತೋರಿಸಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿ ಸಿಂಧು ಸಣ್ಣಪ್ಪ 4 ತಿಂಗಳು ಗರ್ಭಿಣಿ ಎಂದು ತಿಳಿದು ಬಂದಿದೆ. ಇವರ ಪತಿ ಸೂರ್ಯಜಿ ತುಂಬರೆ ಸಹ ಅರಣ್ಯ ಇಲಾಖೆಯ ರೇಂಜರ್ ಆಗಿದ್ದಾರೆ.
ಮಹಾರಾಷ್ಟ್ರದ ಸತಾರ ಎಂಬಲ್ಲಿ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಮೇಲೆ ಅಮಾನವೀಯ ರೀತಿಯಲ್ಲಿ ಅಲ್ಲಿನ ಸ್ಥಳೀಯರು ಹಲ್ಲೆ ನಡೆಸಿರುವುದು ಖಂಡನೀಯ. ಅರಣ್ಯ ಇಲಾಖೆ ಸಿಬ್ಬಂದಿಗೆ ರಕ್ಷಣಯೇ ಇಲ್ಲದಂತಾಗಿದೆ. ಮಹಿಳಾ ಅಧಿಕಾರಿ ಗರ್ಭಿಣಿ ಎಂಬುದನ್ನು ನೋಡದೆ ಈ ರೀತಿ ಹೇಯ ಕೃತ್ಯ ನಡೆಸಿದವರ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕು.
ವಿಠ್ಠಲ್ ಜೋನಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಅರಣ್ಯ ರಕ್ಷಕರು ಮತ್ತು ಅರಣ್ಯ ವೀಕ್ಷಕರ ಸಂಘ
ಇದೀಗ ಮಾಜಿ ಸರಪಂಚ್, ಆತನ ಪತ್ನಿ ಹಾಗೂ ಅರಣ್ಯ ಸಮಿತಿಯ ರಾಮಚಂದ್ರ ಜಂಕರ್ ವಿರುದ್ಧ ಸತಾರ್ ತಾಲೂಕು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಯಾವ ಕಾರಣಕ್ಕೆ ಈ ರೀತಿಯಾಗಿ ಹಲ್ಲೆ ಮಾಡಿದ್ದಾರೆ ಅನ್ನೋದು ತಿಳಿದು ಬರಬೇಕಿದೆ. ಈ ಬಗ್ಗೆ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಇದನ್ನು ಟ್ವೀಟ್ ಮಾಡಿದ್ದಾರೆ.