ಪ್ರಜಾಸ್ತ್ರ ಅಪರಾಧ ಸುದ್ದಿ
ಹುಬ್ಬಳ್ಳಿ: ಇಲ್ಲದ ಕೆಟ್ಟ ಯೋಚನೆ ಬಿಟ್ಟು ಸುಮ್ಮನೆ ಇದ್ದಿದ್ದರೆ ಇವನ ಮದುವೆ ನಾಳೆ ನಡೆದು ಹೋಗುತಿತ್ತು. ಆದರೆ, ಮಾಡಬಾರದ ಕೆಲಸ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ ವಿಜಯಪುರದ ಹುಡುಗ.
ಘಟನೆ ಏನು?
ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿನ ಎಸ್ ಬಿಐ ಬ್ಯಾಂಕಿಗೆ ಪ್ರವೀಣ್ ಕುಮಾರ್ ಅನ್ನೋ ಯುವಕ ಗ್ರಾಹಕರ ಸೋಗಿನಲ್ಲಿ ಹೋಗಿದ್ದಾನೆ. ನಂತರ ಮ್ಯಾನೇಜರ್ ಹಾಗೂ ಕ್ಯಾಷಿಯರ್ ಗೆ ಚಾಕು ತೋರಿಸಿ ಹೆದರಿಸಿ 6 ಲಕ್ಷ ರೂಪಾಯಿಯನ್ನು ಚೀಲಕ್ಕೆ ತುಂಬಿಸಿಕೊಂಡು ಎಸ್ಕೇಪ್ ಆಗಲು ನೋಡಿದ್ದಾನೆ. ಆದರೆ, ಅಲ್ಲೇ ಇದ್ದ ಇಬ್ಬರು ಪೊಲೀಸರು ಬೆನ್ನು ಹತ್ತಿ ಹಿಡಿದಿದ್ದಾರೆ.
ಬ್ಯಾಂಕ್ ದರೋಡೆಗೆ ಪ್ಲಾನ್ ಮಾಡಿದ್ಯಾಕೆ?
ಆರೋಪಿ ಪ್ರವೀಣ್ ಕುಮಾರ್ ಮೂಲತಃ ವಿಜಯಪುರ ಜಿಲ್ಲೆಯವನು. ಮೈಸೂರಿನ ಊಟಿ ರಸ್ತೆಯಲ್ಲಿರುವ ಟಿವಿಎಸ್ ಷೋ ರೂಂನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಈ ವೇಳೆ ಸ್ನೇಹಿತರು ಸೇರಿದಂತೆ ಅವರಿವರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದಾನೆ. ಇದರ ನಡುವೆ ಮದುವೆ ಫಿಕ್ಸ್ ಆಗಿದೆ. ಸಾಲ ಹಾಗೂ ಅದ್ಧೂರಿ ಮದುವೆ ಮಾಡಿಕೊಳ್ಳಲು ಬ್ಯಾಂಕ್ ದರೋಡೆಗೆ ಹೋಗಿದ್ದಾನೆ. ಗ್ರಹಚಾರ ಕೆಟ್ಟು ಹೆಣ್ಣು ಕೊಟ್ಟ ಮಾವನ ಮನೆಗೆ ಹೋಗುವುದು ಬಿಟ್ಟು ಲಾಠಿ ಏಟು ಕೊಡುವ ಮಾವನ ಮನೆಗೆ ಹೋಗಿದ್ದಾನೆ.