ಸಿಂದಗಿ: ಸಿಂದಗಿ ಪಟ್ಟಣದಲ್ಲಿ ನಿನ್ನೆ ಮಧ್ಯರಾತ್ರಿ ಸುರಿದ ಮಳೆಯಿಂದಾಗಿ ಜನರಲ್ಲಿ ಖುಷಿ ಮನೆ ಮಾಡಿದೆ. ಜೂನ್ ಶುರುವಿನಲ್ಲಿಯೇ ಮಳೆ ಕಾಣಿಸಿಕೊಂಡಿದ್ದು ಪ್ರತಿಯೊಬ್ಬರಿಗೂ ಸಂತಸವನ್ನುಂಟು ಮಾಡಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಾದ್ಯಂತ ಭರ್ಜರಿ ಮಳೆಯಾಗಿದೆ.
ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಶುರುವಾದ ಮಳೆ ಬೆಳಗಿನ ಜಾವ 6ಗಂಟೆಯ ತನಕ ಸುರಿದಿದೆ. ಸಿಂದಗಿ, ಚಿಕ್ಕ ಸಿಂದಗಿ, ಬಂದಾಳ, ಬೂದಿಹಾಳ, ಯಂಕಂಚಿ, ಬ್ಯಾಕೋಡ, ಬನಹಟ್ಟಿ, ಮಲಘಾಟ, ಆಲೇಮಲ, ಅಸ್ಕಿ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ವರುಣ ಕಾಣಿಸಿಕೊಂಡಿದ್ದಾನೆ. ಹೀಗಾಗಿ ರೈತರ ಮೊಗ ಅರಳಿದೆ.
ಮುಂಜಾನೆ 8 ಗಂಟೆಯಾದ್ರೆ ಸಾಕು, ರಣರಣ ಬಿಸಿಲು ಅನ್ನೋದು ಜನರನ್ನ ಕಾಡಲು ಶುರು ಮಾಡ್ತಿತ್ತು. ಇದರ ಎಫೆಕ್ಟ್ ಸಂಜೆ 7ಗಂಟೆಯ ತನಕ ಇರ್ತಿತ್ತು. ಇಂದು ಎಲ್ಲೆಡೆ ತುಂಪು ಕಾಣಿಸಿಕೊಂಡಿದ್ದು, ಸೂರ್ಯದೇವ ಸ್ವಲ್ಪ ಲೇಟವಾಗಿ ಬರುವ ಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನು ಮುಂದೆ ಉತ್ತಮವಾದ ಮಳೆಯಾಗ್ಲಿ ಅಂತಾ ಜನರು ದೇವರಲ್ಲಿ ಬೇಡಿಕೊಳ್ತಿದ್ದಾರೆ.
ಸಿಂದಗಿ ತಾಲೂಕು ವಿಜಯಪುರ ಜಿಲ್ಲೆಯಲ್ಲಿಯೇ ದೊಡ್ಡದು ಅನ್ನೋ ಹೆಸರಿದೆ. ಆದ್ರೆ, ಇಲ್ಲಿನ ಬಸ್ ನಿಲ್ದಾಣ, ತಹಶೀಲ್ದಾರ್ ಆಫೀಸ್ ಸೇರಿದಂತೆ ಅನೇಕ ಕಡೆ ಮಳೆ ನೀರು, ಕೊಳಚೆ ನೀರು ತುಂಬಿಕೊಳ್ಳುವುದ್ರಿಂದ ಸಾರ್ವಜನಿಕರಿಗೆ ಹೈರಾಣು ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸಂಬಂಧಪಟ್ಟವರು ಇದರ ಬಗ್ಗೆ ಸೂಕ್ತ ಕ್ರಮಗಳನ್ನ ಕೈಗೊಳ್ಳಬೇಕು ಅಂತಾ ಸ್ಥಳೀಯರು ಆಗ್ರಹಿಸಿದ್ದಾರೆ.