ಪ್ರಜಾಸ್ತ್ರ ಸುದ್ದಿ
ಅಯೋಧ್ಯೆ: ಶ್ರೀರಾಮ ಮಂದಿರ ನಿರ್ಮಾಣವಾಗುವ ಗರ್ಭಗುಡಿಯ ಜಾಗದಲ್ಲಿ 5 ಇಟ್ಟಿಗೆ ಇಡುವ ಮೂಲಕ ಪ್ರಧಾನಿ ಮೋದಿ ಭೂಮಿ ಪೂಜೆಯನ್ನ ನೆರವೇರಿಸಿದ್ರು. ನಂದಾ, ಭದ್ರಾ, ಜಯಾ, ರಿಕ್ತಾ ಹಾಗೂ ಪೂರ್ಣ ಹೆಸರಿನ 5 ಇಟ್ಟಿಗೆಗಳನ್ನ ಇಡುವ ಮೂಲಕ ಪ್ರಧಾನಿ ಮೋದಿ ಶಂಕುಸ್ಥಾಪನೆ ಮಾಡಿದ್ರು. ಶಿಲಾನ್ಯಾಸದ ಬಳಿಕ ಕಳಸ ಪ್ರತಿಷ್ಠಾಪನೆ ಮಾಡಲಾಯ್ತು.
ಭೂಮಿಪೂಜೆಗೂ ಮೊದ್ಲು ಪ್ರಧಾನಿ ಮೋದಿ ಹನುಮಗಡಿಗೆ ಭೇಟಿ ನೀಡಿ ಅಲ್ಲಿ ಭಜರಂಗಿಯ ದರ್ಶನ ಪಡೆದ್ರು. ನಂತರ ರಾಮಲಲ್ಲಾದಲ್ಲಿ ಪೂಜೆ ಸಲ್ಲಿಸಿದ್ರು. ಅಲ್ಲಿಂದ ಭೂಮಿಪೂಜೆ ನಡೆಯುವ ಸ್ಥಳಕ್ಕೆ ಆಗಮಿಸಿ ನೆನಪಿಗಾಗಿ ಪಾರಿಜಾತ ಸಸಿ ನೆಟ್ಟರು.
ಇನ್ನು ಶಂಕುಸ್ಥಾಪನೆಗೂ ಮೊದ್ಲು ವೈದಕರಿಂದ ಗಣಪತಿ ಪೂಜೆ ಮಾಡಲಾಯ್ತು. ಗಂಧಾಕ್ಷತೆ, ಪುಷ್ಪಾರ್ಚನೆ, ಪೃಥ್ವಿ ಪೂಜೆ ನಡೆಸಲಾಯ್ತು. ಈ ವೇಳೆ ಆರ್ ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ, ಸಿಎಂ ಯೋಗಿ ಆದಿತ್ಯನಾಥ, ರಾಜ್ಯಪಾಲರಾದ ಆನಂದ ಬೆನ್ ಪಟೇಲ ಹಾಗೂ ಅರ್ಚರು ಮಾತ್ರ ಹೋಮದ ಬಳಿ ಆಸೀನರಾಗಿದ್ರು. ಉಳಿದ ಗಣ್ಯರು, ಸಾಧು ಸಂತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಮಂದಿರಕ್ಕೆ ಕರಸೇವಕರು ತಂದಿದ್ದ ಇಟ್ಟಿಗೆಗಳನ್ನ ಬಳಸಲಾಗಿದೆ. 1989ರಲ್ಲಿ ಕರಸೇವಕರು ಇಟ್ಟಿಗೆ ತಂದಿದ್ರು. ಶಿಲಾನ್ಯಾಸಕ್ಕೆ 100 ಇಟ್ಟಿಗೆಗಳನ್ನ ಬಳಸಲಾಗಿದೆ. 2.75 ಲಕ್ಷ ಇಟ್ಟಿಗೆಗಳನ್ನ ಬಳಸಲಾಗ್ತಿದೆ. ಸಾಧು ಸಂತರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಲಾಯ್ತು. ಒಟ್ಟು 175 ಜನರು ಇದರಲ್ಲಿ ಭಾಗವಹಿಸಿದ್ದಾರೆ.