ಪ್ರಜಾಸ್ತ್ರ ಅಪರಾಧ ಸುದ್ದಿ
ಹುಬ್ಬಳ್ಳಿ: ಕೆಜಿಎಫ್-2 ಚಿತ್ರ ನೋಡುವ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ನಡೆದಿದೆ. ಗಾಯಾಳು ವಸಂತಕುಮಾರ ಶಿವಪುರ(28) ಅನ್ನೋ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡು ಹಾರಿಸಿದ ಆರೋಪಿ ಪರಾರಿಯಾಗಿದ್ದಾನೆ. ಆತನ ಕುರಿತು ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಶಿಗ್ಗಾವಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆ
ಮುಗಳಿ ಗ್ರಾಮದ ವಸಂತಕುಮಾರ್ ಸ್ನೇಹಿತರೊಂದಿಗೆ ಮಂಗಳವಾರ ರಾತ್ರಿ ಕೆಜಿಎಫ್ ಸಿನಿಮಾ ನೋಡಲು ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರಕ್ಕೆ ಬಂದಿದ್ದಾನೆ. ಸಿನಿಮಾ ನೋಡುವಾಗ ವಸಂತಕುಮಾರ್, ಕಾಲನ್ನು ಮುಂದಿನ ಕುರ್ಚಿಯ ಮೇಲೆ ಇಟ್ಟಿದ್ದಾನೆ. ಮುಂದೆ ಕುಳಿತಿದ್ದ ಆರೋಪಿ ಕಾಲು ತೆಗೆಯಲು ಹೇಳಿದ್ದಾನೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
ಇದಾದ ಬಳಿಕ ಆರೋಪಿ ಹೊರಗೆ ಹೋಗಿ ಸುಮಾರು 10 ನಿಮಿಷದ ನಂತರ ವಾಪಸ್ ಬಂದು ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಎರಡು ಗುಂಡು ಕಾಲಿಗೆ ಬಿದ್ದಿವೆ. ಒಂದು ಮಿಸ್ ಫೈಯರ್ ಆಗಿದೆ. ಇದೀಗ ಆರೋಪಿ ಪತ್ತೆ ಹಾಗೂ ಘಟನೆ ತನಿಖೆಯನ್ನು ಪೊಲೀಸರು ನಡೆಸಿದ್ದಾರೆ.