ಪ್ರಜಾಸ್ತ್ರ ಫಾಲೋಅಪ್ ಸ್ಟೋರಿ
ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿರುವ ಐಸಿಐಸಿಐ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ರಾಹುಲ ಖೀರು ರಾಠೋಡ ಎಂಬಾತನನ್ನ ಆಗಸ್ಟ್ 24ರ ಮಧ್ಯರಾತ್ರಿ ಹತ್ಯೆ ಮಾಡಲಾಗಿದೆ. ಬ್ಯಾಂಕ್ ದರೋಡೆಗೆ ಬಂದ ಮೂವರು ಈ ಕೃತ್ಯ ಎಸಗಿ ಹೋಗಿದ್ದಾರೆ. ಮೂವರು ದುಷ್ಕರ್ಮಿಗಳು ಬಂದಿರುವುದು ಸಿಸಿಟಿವಿಯಲ್ಲಿ ಕಾಣಿಸಿದೆ.
ಕಳೆದ ಒಂದು ವಾರದ ಹಿಂದೆ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಆರೋಪಿಗಳ ಪತ್ತೆಯಾಗಿಲ್ಲ. ಈ ಬಗ್ಗೆ ಸುಳಿವು ಸಿಕ್ಕಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಸಿಂದಗಿ ಸಿಪಿಐ ಹೆಚ್.ಎಂ ಪಾಟೀಲ ಅವರನ್ನ ಕೇಳಿದ್ರೆ, ಸಧ್ಯಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಎರಡ್ಮೂರು ಆ್ಯಂಗಲ್ ನಲ್ಲಿ ತನಿಖೆ ಮಾಡಲಾಗ್ತಿದೆ ಎಂದು ‘ಪ್ರಜಾಸ್ತ್ರ’ಕ್ಕೆ ತಿಳಿಸಿದ್ದಾರೆ.
ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ ಅಗರವಾಲ್ ಅವರನ್ನ ಕೇಳಿದ್ರೆ, ನಮ್ಮ ಕೆಲಸ ಮಾಡ್ತಿದ್ದೇವೆ ಎಂದು ಹೇಳಿ ಫೋನ್ ಕಟ್ ಮಾಡಿದ್ರು ವಿನಾಃ ಹೆಚ್ಚಿಗೆ ಮಾತ್ನಾಡಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ವಿಶೇಷ ತಂಡವೇನಾದ್ರೂ ರಚಿಸಲಾಗಿದೆಯಾ? ಯಾರ ನೇತೃತ್ವದಲ್ಲಿ ತಂಡ ರಚನೆಯಾಗಿದೆ? ಏನಾದ್ರೂ ಸುಳಿವು ಸಿಕ್ಕಿದ್ಯಾ? ಪಟ್ಟಣದಲ್ಲಿ ಭಯ ಮುಕ್ತ ವಾತಾವರಣಕ್ಕೆ ಏನು ಮಾಡಲಾಗಿದೆ ಅನ್ನೋದು ಸೇರಿದಂತೆ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಕಾಡುತ್ತಿವೆ. ಈ ಬಗ್ಗೆ ಮಾಹಿತಿ ಪಡೆಯಲು ಫೋನ್ ಮಾಡಿದ್ರೆ ಎಸ್ಪಿ ಅವರೆ ಸರಿಯಾಗಿ ಉತ್ತರಿಸದೆ ಹೋದ್ರೆ ಯಾರನ್ನ ಕೇಳಬೇಕು ಅನ್ನೋ ಪ್ರಶ್ನೆ ಮೂಡಿದೆ.
ಅನೇಕ ಎಟಿಎಂಗಳು ಬಂದ್!
ಸೆಕ್ಯೂರಿಟಿ ಗಾರ್ಡ್ ಹತ್ಯೆ ಘಟನೆ ಬಳಿಕ ಪಟ್ಟಣದಲ್ಲಿನ ಬಹುತೇಕ ಎಟಿಎಂಗಳು ಬಂದ್ ಆಗಿವೆ. ಕೆನರಾ, ಆಕ್ಸಿಸ್, ಬರೋಡಾ ಸೇರಿದಂತೆ ಕೆಲ ಎಟಿಎಂಗಳು ಬಂದ್ ಆಗಿದ್ರೆ, ಇನ್ನು ಕೆಲವು ಎಟಿಎಂಗಳಲ್ಲಿ ದುಡ್ಡು ಇರುವುದಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಆದಷ್ಟು ಬೇಗ ಹಂತಕರನ್ನ ಪತ್ತೆ ಹಚ್ಚಿ ಸೂಕ್ತ ಶಿಕ್ಷೆ ನೀಡಬೇಕಿದೆ. ಇಲ್ಲದೆ ಹೋದ್ರೆ ತಾಲೂಕಿನ ಜನತೆ ಭಯದ ನಡುವೆ ಜೀವನ ಮಾಡಬೇಕಾಗುತ್ತೆ.