ಪ್ರಜಾಸ್ತ್ರ ವಿಶೇಷ ಸುದ್ದಿ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಪೌರ ಕಾರ್ಮಿಕರ ಸ್ಥಿತಿ ನೋಡಿದರೆ ವ್ಯವಸ್ಥೆ ಬಗ್ಗೆ ನಿಜಕ್ಕೂ ಆಕ್ರೋಶ ವ್ಯಕ್ತವಾಗುತ್ತೆ. ಎಷ್ಟೇ ಟೆಕ್ನಾಲಜಿ ಬೆಳೆದರೂ ಪೌರಕಾರ್ಮಿಕರ ಸ್ಥಿತಿ ಇನ್ನು ಬದಲಾಗಿಲ್ಲ ಅನ್ನೋದಕ್ಕೆ ಈ ಫೋಟೋಗಳು ತಾಜಾ ಉದಾಹರಣೆ. ಕೋವಿಡ್ 19 ಸಂದರ್ಭದಲ್ಲಿಯೂ ಸಿಂದಗಿ ಪುರಸಭೆ ಪೌರಕಾರ್ಮಿಕರಿಗೆ ಯಾವುದೇ ಸುರಕ್ಷಿತ ಕಿಟ್ ಗಳನ್ನ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪಟ್ಟಣದಲ್ಲಿ ಚರಂಡಿ, ಮ್ಯಾನ್ ಹೋಲ್ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ಮಾಸ್ಕ್, ಶೂ, ಹೆಲ್ಮೆಟ್ ಸೇರಿದಂತೆ ಮುಂಜಾಗ್ರತೆ ವಹಿಸಿಕೊಳ್ಳಬೇಕಾದ ಯಾವುದೇ ವಸ್ತುಗಳನ್ನು ನೀಡಿಲ್ಲ. ಹೀಗಾಗಿ ಬರಿಗೈಯಿಂದ ಚರಂಡಿ, ಮ್ಯಾನ್ ಹೋಲ್ ಸ್ವಚ್ಛ ಮಾಡ್ತಿದ್ದಾರೆ.
ಕೋವಿಡ್ ವಾರಿಯರ್ಸ್ ಮೊದಲ ಸಾಲಿನಲ್ಲಿ ಪೌರ ಕಾರ್ಮಿಕರು ಇದ್ದಾರೆ. ಕರೋನಾ ಮಹಾಮಾರಿ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿಯೂ ಅವರಿಗೆ ಯಾವುದೇ ಸುರಕ್ಷಿತ ಸಾಧನಗಳನ್ನು ನೀಡದೆ, ಮ್ಯಾನ್ ಹೋಲ್ ಸ್ವಚ್ಛತೆ ಮಾಡಿಸುತ್ತಿರುವುದು ನಿಜಕ್ಕೂ ಖಂಡನೀಯ. ಪುರಸಭೆ ಮುಖ್ಯಾಧಿಕಾರಿ, ಪಿಡಿ ಅವರು ಪೌರಕಾರ್ಮಿಕರ ಬಗ್ಗೆ ಅತ್ಯಂತ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಸಂತೋಷ ಪೂಜಾರಿ, ದಲಿತ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಪುರಸಭೆ ಅಧಿಕಾರಿಗಳು ಸುರಕ್ಷಾ ಸಮವಸ್ತ್ರ ನೀಡದೆ ಪೌರಕಾರ್ಮಿಕರ ಜೀವನದ ಜೊತೆ ಆಟವಾಡುತ್ತಿದ್ದಾರೆ. ಕೋವಿಡ್ ಭೀತಿಯಲ್ಲೂ ಈ ರೀತಿಯಾಗಿ ಬೇಜಾವಾಬ್ದಾರಿತನ ಪ್ರದರ್ಶನ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪೌರಕಾರ್ಮಿಕರ ಸುರಕ್ಷತೆಗಾಗಿಯೇ ಫಂಡ್ ಬರುತ್ತೆ. ಇದು ಮುಖ್ಯಾಧಿಕಾರಿಗೂ ಗೊತ್ತು. ನಾವು ಪ್ರಶ್ನೆ ಮಾಡಿದರೆ ಒಂದು ದಿನ ಕೊಡುತ್ತಾರೆ. ಆಮೇಲೆ ಅದೆ ರಾಗ ಅದೆ ಹಾಡು. ಪುರಸಭೆಯಲ್ಲಿ ಆರೋಗ್ಯಾಧಿಕಾರಿಯೂ ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ. ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನ ಅಧಿಕಾರಿಗಳು ತಮ್ಮ ವೈಯಕ್ತಿವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಸುದರ್ಶನ ಜಿಂಗಾಣಿ, ಸ್ಥಳೀಯರು