‘ಕೈ’ ಕೊಟ್ಟವರ ಸದಸ್ಯತ್ವ ರದ್ದತಿಗೆ ಮಾಜಿ ಶಾಸಕ ಸುಣಗಾರ ರೆಡಿ

979

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಂದು ನಡೆದ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಗೆಲುವಿನ ನಗೆ ಬೀರಿದೆ. ಈ ಮೂಲಕ ಕಾಂಗ್ರೆಸ್ ಕೋಟೆಯಾಗಿದ್ದ ಪುರಸಭೆಯನ್ನ ಜೆಡಿಎಸ್ ಇದೀಗ ವಶ ಪಡಿಸಿಕೊಂಡಿದೆ.

23 ಜನ ಪುರಸಭೆ ಸದಸ್ಯರಲ್ಲಿ 11 ಕಾಂಗ್ರೆಸ್ ಸದಸ್ಯರು, 6 ಜೆಡಿಎಸ್ ಸದಸ್ಯರು, 3 ಬಿಜೆಪಿ ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರ ಸದಸ್ಯರು ಈ ಮೊದ್ಲು ಕಾಂಗ್ರೆಸ್ ಗೆ ಬೆಂಬಲ ನೀಡುವ ಮಾತು ಆಡಿದ್ರು. ಹೀಗಾಗಿ ಈ ಬಾರಿಯೂ ಕಾಂಗ್ರೆಸ್ ಪುರಸಭೆ ಚುಕ್ಕಾಣಿ ಹಿಡಿಯುತ್ತೆ ಅನ್ನೋ ಟೈಂನಲ್ಲಿ ಉಲ್ಟಾ ಆಗಿದೆ.

1ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಪ್ರತಿಭಾ ಕಲ್ಲೂರ, 3ನೇ ವಾರ್ಡ್ ಕಾಂಗ್ರಸ್ ಸದಸ್ಯ ಶ್ರೀಶೈಲ ಬೀರಗೊಂಡ, 8ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಹಾಸೀಂಪೀರ ಆಳಂದ ಹಾಗೂ 19ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಮುಲ್ಲಾ ಜೆಡಿಎಸ್ ಗೆ ಜೈ ಅಂದಿದ್ದಾರೆ. ಇದರ ಜೊತೆಗೆ ಇಬ್ಬರು ಪಕ್ಷೇತರರು ಹಾಗೂ 3 ಬಿಜೆಪಿ ಸದಸ್ಯರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ 13ನೇ ವಾರ್ಡ್ ಜೆಡಿಎಸ್ ಸದಸ್ಯ ಡಾ.ಶಾಂತವೀರ ಮನಗೂಳಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. 8ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಹಾಸೀಂಪೀರ ಆಳಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ವಿಪ್ ಜಾರಿ ಮಾಡಿದ್ರೂ 4 ಜನ ಸದಸ್ಯರು ಅದನ್ನ ಉಲ್ಲಂಘನೆ ಮಾಡಿದ್ದಾರೆ. ಈ 4 ಜನ ಸದಸ್ಯರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಸದಸ್ಯತ್ವ ರದ್ಧುಗೊಳಿಸುವಂತೆ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ.

ಶರಣಪ್ಪ ಸುಣಗಾರ, ಕಾಂಗ್ರೆಸ್ ಮಾಜಿ ಶಾಸಕರು

ಪುರಸಭೆ ಮೀಸಲಾತಿ ಘೋಷಣೆಯಾದಾಗಿನಿಂದ ಸಾಕಷ್ಟು ಕಣ್ಣಾಮುಚ್ಚಾಲೆ ನಡೆದಿದೆ. ಹೀಗಾಗಿ ಕಾಂಗ್ರೆಸ್ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಹೀಗಿದ್ರೂ, ಪ್ರತಿಭಾ ಕಲ್ಲೂರ, ಶ್ರೀಶೈಲ ಬೀರಗೊಂಡ, ಹಾಸೀಂಪೀರ ಆಳಂದ, ಮುಲ್ಲಾ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಖೈರನುಬಿ ನಾಟೀಕಾರ, ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಸಂದೀಪ ಚೌರಗೆ ಸೋಲುಂಟಾಗಿದೆ.

ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರು, ವಿಪ್ ಉಲ್ಲಂಘನೆ ಮಾಡಿರುವ 4 ಜನ ಸದಸ್ಯರ ವಿರುದ್ಧ ಕೆಪಿಸಿಸಿ ನಾಯಕರಿಗೆ ದೂರು ಸಲ್ಲಿಸಿ ಸದಸ್ಯತ್ವ ರದ್ದುಗೊಳಿಸುವಂತೆ ಕೋರಲು ಮುಂದಾಗಿದ್ದಾರೆ. ಒಂದು ವೇಳೆ ಸದಸ್ಯತ್ವ ರದ್ಧಾದ್ರೆ 6 ತಿಂಗಳಲ್ಲಿ ಮತ್ತೆ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!