ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜೂನ್ 25 ರಿಂದ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆ ಪ್ರಾರಂಭವಾಗ್ತಿವೆ. ಕರೋನಾ ಲಾಕ್ ಡೌನ್ ನಿಂದಾಗಿ ಇಷ್ಟು ದಿನಗಳ ಕಾಲ ಪರೀಕ್ಷೆ ನಡೆಸಿರಲಿಲ್ಲ. ಈಗ ಜೂನ್ 25ರಿಂದ ಪರೀಕ್ಷೆ ನಡೆಯಲಿವೆ. ಹೀಗಾಗಿ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಉಚಿತ ಬಸ್ ಸೇವೆ ಒದಗಿಸುವುದಾಗಿ ಹೇಳಿದೆ.
ಡಿಸಿಎಂ ಹಾಗೂ ಸಾರಿಗೆ ಸಚಿವರಾಗಿರುವ ಲಕ್ಷ್ಮಣ ಸವದಿ ಅವರು, ವಿದ್ಯಾರ್ಥಿಗಳಿಗೆ ಪರೀಕ್ಷೆ ಟೈಂನಲ್ಲಿ ಉಚಿತ ಬಸ್ ಸೇವೆ ಬಗ್ಗೆ ಇಲಾಖೆಗೆ ಖಡಕ್ ಸೂಚನೆ ನೀಡಬೇಕಿದೆ. ಸಚಿವರು ಉಚಿತ ಸೇವೆ ಎಂದು ಹೇಳ್ತಾರೆ. ಆದ್ರೆ, ವಾಸ್ತವದಲ್ಲಿ ಬಸ್ ಕಂಡಕ್ಟರ್ ಗಳು ವಿದ್ಯಾರ್ಥಿಗಳನ್ನ ಬಸ್ ಗೆ ಹತ್ತಲು ಸಹ ಬಿಡುವುದಿಲ್ಲ. ಇದರಿಂದಾಗಿ ಗ್ರಾಮೀಣ, ಹೋಬಳಿ, ಪಟ್ಟಣ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಪಿಯುಸಿಯ ಕೊನೆ ಪರೀಕ್ಷೆ ಟೈಂನಲ್ಲಿ ಇಂಥಾ ಘಟನೆಗಳು ನಡೆದಿವೆ. ಹೀಗಾಗಿ ಸಾರಿಗೆ ಸಚಿವರು, ಶಿಕ್ಷಣ ಸಚಿವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಕರೋನಾ ಸೋಂಕಿನಿಂದಾಗಿ ಬಸ್ ಗಳಲ್ಲಿ 30 ಜನಕ್ಕೆ ಮಾತ್ರ ಸೀಮಿತ ಮಾಡಿರುವುದ್ರಿಂದ ಸಾರ್ವಜನಿಕರ ಜೊತೆಗೆ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗುವುದು ಕಷ್ಟವಾಗಬಹುದು. ಹೀಗಾಗಿ ಪರೀಕ್ಷೆ ದಿನಗಳಲ್ಲಿ ಮಾತ್ರ ವಿಶೇಷ ಬಸ್ ವ್ಯವಸ್ಥೆ ಮಾಡುವ ಮೂಲಕ, ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ. ಈ ವಿಚಾರದಲ್ಲಿ ಬಸ್ ನಿರ್ವಾಹಕ ಹಾಗೂ ಚಾಲಕರು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕಿದೆ.